ಬೆಂಗಳೂರು: ಹೊಸ ತಾಲ್ಲೂಕು ರಚನೆಗೆ ಮತ್ತೆ ಜೀವ ಬಂದಿದೆ. ಮುಂದಿನ ಬಜೆಟ್ನಲ್ಲಿ ಈ ಕುರಿತ ಘೋಷಣೆ ಇರುತ್ತದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಗುರುವಾರ ಇಲ್ಲಿ ತಿಳಿಸಿದರು.
ಹಿಂದಿನ ಸರ್ಕಾರ 43 ಹೊಸ ತಾಲ್ಲೂಕು ರಚನೆಗೆ ತೀರ್ಮಾನ ಮಾಡಿತ್ತು. ಅದನ್ನು ತಕ್ಷಣಕ್ಕೆ ಅನುಷ್ಠಾನ ಮಾಡಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿ ಜತೆ ಚರ್ಚಿಸಿ, ಮುಂದಿನ ಬಜೆಟ್ನಲ್ಲಿ ಅದನ್ನು ಸೇರಿಸ ಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ಸರ್ಕಾರಿ ಭೂ ಒತ್ತುವರಿ ತೆರವಿಗೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕಂದಾಯ, ಅರಣ್ಯ ಮತ್ತು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಅದರ ಹೊಣೆ ಹೊರಿಸಲಾಗಿದೆ ಎಂದರು.
ಪ್ರಸ್ತುತ 98 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದ್ದು, ಹೆಚ್ಚುವರಿ ತಾಲ್ಲೂಕುಗಳ ಸೇರ್ಪಡೆ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ತಮ್ಮ ನೇತೃತ್ವದ ಸಂಪುಟ ಉಪ ಸಮಿತಿ ಈ ಕುರಿತು ಚರ್ಚಿಸಲು ಇನ್ನೂ ಸಭೆ ಸೇರಿಲ್ಲ ಎಂದು ಸಚಿವ ಶ್ರೀನಿವಾಸ ಪ್ರಸಾದ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.