ಮೊಹಾಲಿ: `ದೆಹಲಿಯಲ್ಲಿ ಭಾರತ ಪಂದ್ಯ ಜಯಸಿದ್ದೇ ಹೆಚ್ಚು ಖುಷಿ ಕೊಟ್ಟಿದೆ. ಅದರಲ್ಲಿ ನನ್ನದು ಕಾಣಿಕೆ ಇತ್ತು ಎನ್ನುವುದು ಹೆಮ್ಮೆಯ ವಿಷಯ. ನನಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವುದಕ್ಕಿಂತಲೂ ದೇಶ ಗೆಲ್ಲುವುದೇ ಮುಖ್ಯ~-
ಬುಧವಾರ ದೇಶ-ವಿದೇಶದ ಸುಮಾರು 70ಕ್ಕೂ ಹೆಚ್ಚು ಮಾಧ್ಯಮ ಪ್ರತಿನಿಧಿಗಳ ಮುಂದೆ ಕುಳಿತಿದ್ದ `ದಾವಣಗೆರೆ ಎಕ್ಸ್ಪ್ರೆಸ್~ ಆರ್. ವಿನಯಕುಮಾರ್ ದೃಢವಾದ ಧ್ವನಿಯಲ್ಲಿ ಮಾತನಾಡುತ್ತಿದ್ದರು.
ದೆಹಲಿ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದಿದ್ದ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೊಡಬೇಕಿತ್ತೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸ್ಥಿತಪ್ರಜ್ಞರಂತೆ ಉತ್ತರಿಸಿದರು. ಎಂಟು ಏಕದಿನ ಪಂದ್ಯಗಳನ್ನಾಡಿರುವ ವಿನಯಕುಮಾರ್ ಇದೇ ಮೊದಲ ಬಾರಿಗೆ ಮಾಧ್ಯಮಗೋಷ್ಠಿಗೆ ಆಗಮಿಸಿದ್ದರು.
`ದೆಹಲಿಯ ಪಿಚ್ ಒಳ್ಳೆಯ ಎಸೆತಗಳಿಗೆ ಉತ್ತಮ ಸ್ಪಂದನೆ ನೀಡುತ್ತದೆ ಎನ್ನುವುದರ ಅರಿವಿತ್ತು. ಅದೇ ರೀತಿ ಆಯಿತು. ಸೂಕ್ತವಾದ ಜಾಗದಲ್ಲಿ ಎಸೆತ ಹಾಕಿದ್ದು ಫಲ ನೀಡಿತು. ಹೊಸ ನಿಯಮದ ಪ್ರಕಾರ ಎರಡು ಹೊಸ ಚೆಂಡು ಸಿಗುತ್ತಿರುವುದು ನನಗೆ ಮತ್ತು ಪ್ರವೀಣಕುಮಾರ್ಗೆ ಪ್ಲಸ್ ಪಾಯಿಂಟ್~ ಎಂದರು.
`ಕಳೆದ ತಿಂಗಳು ಇಂಗ್ಲೆಂಡ್ನಲ್ಲಿ ಬೌಲಿಂಗ್ ಮಾಡಿದ ರೀತಿಯಲ್ಲಿಯೇ ಇಲ್ಲಿಯೂ ಮಾಡುತ್ತಿದ್ದೇನೆ. ಯಾವುದೇ ಬದಲಾವಣೆಗಳನ್ನು ಮಾಡಿಕೊಂಡಿಲ್ಲ. ಅಲ್ಲಿಯೂ ನಾವು ಚೆನ್ನಾಗಿಯೇ ಪ್ರದರ್ಶನ ನೀಡಿದ್ದೆವು~ ಎಂದು ಹೇಳಿದರು.
`ಮೊಹಾಲಿಯ ಅಂಗಳದಲ್ಲಿ ಸ್ವಲ್ಪ ಮಟ್ಟಿಗೆ ಹುಲ್ಲು ಇದೆ. ಇದು ವೇಗಿಗಳಿಗೆ ಸಹಕರಿಸಬಹುದು.
ಡ್ರೆಸ್ಸಿಂಗ್ ರೂಮಿನಲ್ಲಿ ಒಳ್ಳೆಯ ವಾತಾವರಣವಿದೆ. ನಾಯಕ ದೋನಿ ಪ್ರತಿಯೊಬ್ಬರೊಂದಿಗೂ ಮಾತನಾಡಿ ಪ್ರೋತ್ಸಾಹಿಸುತ್ತಿದ್ದಾರೆ. ಇದರಿಂದ ತಂಡದಲ್ಲಿ ಆತ್ಮವಿಶ್ವಾಸ ಬೆಳೆದಿದೆ~ ಎಂದು ಹೇಳಿದರು.