ಮಂಡ್ಯ: ಹೊಸ ಪಿಂಚಣಿ ಯೋಜನೆಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿ ಗುರುವಾರ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಲಾಯಿತು.
ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ನೇಮಕಾತಿ ಮೂಲಕ ಭರ್ತಿ ಮಾಡಬೇಕು. ನೌಕರ ವಿರೋಧಿಯಾಗಿರುವ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ವಿಧೇಯಕವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಸೇವೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವುದನ್ನು ಕೈಬಿಡಬೇಕು. ಗುತ್ತಿಗೆ, ದಿನಗೂಲಿ, ತಾತ್ಕಾಲಿಕ ಆಧಾರದ ಮೇಲೆ ನೇಮಕ ಹೊಂದಿದವರನ್ನು ಕಾಯಂಗೊಳಿಸಿ ವೇತನ ಶ್ರೇಣಿ ನೀಡಬೇಕು ಎಂದು ಒತ್ತಾಯಿಸಿದರು.
ಕೋಮುವಾದಿ, ಪ್ರತ್ಯೇಕವಾದಿ ಶಕ್ತಿಗಳನ್ನು ಬೇರ್ಪಡಿಸಲು, ದುರ್ಬಲ ಗೊಳಿಸಲು ಕ್ರಮಕೈಗೊಳ್ಳ ಬೇಕು. 2008ರ ನಂತರ ನೇಮಕವಾದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಎಕ್ಸ್್ ಗ್ರೇಷಿಯಾ ನೀಡಬೇಕು ಎಂದು ಆಗ್ರಹಿಸಿದರು.
ಆರೋಗ್ಯ ವಿಮೆ ಜಾರಿಗೊಳಿಸಿ ಆರೋಗ್ಯ ಭದ್ರತೆ ಒದಗಿಸಬೇಕು. ಪ್ರತಿ ವೇತನ ಪರಿಷ್ಕರಣೆ ಸಂದರ್ಭದಲ್ಲಿ ವಿಶೇಷ ಭತ್ಯೆಯನ್ನೂ ಪರಿಷ್ಕರಿಸಬೇಕು. ಶೇ 50ರ ತುಟ್ಟಿ ಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಜಿಲ್ಲಾ ಘಟಕ ಅಧ್ಯಕ್ಷ ಚಿಕ್ಕಸ್ವಾಮಿ, ಆರ್್್. ಶ್ರೀನಿವಾಸ್, ಗುರುಮೂರ್ತಿ, ರೇಣುಕಾ, ಸಿ.ರುದ್ರಯ್ಯ, ಎನ್.ಎಂ.ಮಲ್ಲೇಶ್, ಎಂ.ಪುಟ್ಟಸ್ವಾಮಿ, ಲಿಂಗೇಗೌಡ ಮತ್ತಿತರರು ಪಾಲ್ಗೊಂಡಿದ್ದರು.