ಬೆಳಗಾವಿ: ಕೆಟ್ಟವನಿಗೂ ಒಳ್ಳೆಯನಾಗುವ ಅವಕಾಶವಿದೆ. ಕಾರಾಗೃಹದಿಂದ ಹೊರಬಂದ ಮೇಲೆ ಹೊಸ ಬಾಳು ಬದುಕಬೇಕು ಎಂದು ನಾಟಕಕಾರ ಡಿ.ಎಸ್. ಚೌಗಲೆ ಸಲಹೆ ನೀಡಿದರು.
ಮೈಸೂರಿನ ಸಂಕಲ್ಪ ಹಾಗೂ ಕರ್ನಾಟಕ ಕಾರಾಗೃಹಗಳ ಇಲಾಖೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಹಿಂಡಲಗಾ ಕೇಂದ್ರ ಕಾರಾಗೃಹ ವಾಸಿಗಳಿಗೆ ಹಮ್ಮಿಕೊಂಡಿದ್ದ ಮನಪರಿವರ್ತನಾ ರಂಗಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
`ಮನುಷ್ಯನ ನಡವಳಿಕೆಯಲ್ಲಿ ಬದಲಾವಣೆ ತರುವ ಶಕ್ತಿ ರಂಗಭೂಮಿಗೆ ಇದೆ. ಇದು ಈ ಹಿಂದೆ ಮೈಸೂರಿನ ಕಾರಾಗೃಹದಲ್ಲಿ ನಡೆಸಿದ ಶಿಬಿರದಲ್ಲಿ ಸಾಬೀತಾಗಿದೆ. ಅಂತಹ ಬದಲಾವಣೆಗೆ ಇಲ್ಲಿನವರೂ ಸಜ್ಜಾಗಬೇಕು~ ಎಂದು ಅವರು ಹೇಳಿದರು.
ಸಂಕಲ್ಪ ನಿರ್ದೇಶಕ ಹುಲಗಪ್ಪ ಕಟ್ಟಿಮನಿ ಮಾತನಾಡಿ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಅವಕಾಶವಿರುವುದು ರಂಗಭೂಮಿಯಲ್ಲಿ ಮಾತ್ರ ಎಂದರು.
ಕಾರಾಗೃಹ ಮುಖ್ಯ ಅಧೀಕ್ಷಕ ಜಿ. ವೀರಭದ್ರಸ್ವಾಮಿ ಮಾತನಾಡಿದರು. ಕಾರಾಗೃಹವಾಸಿ ಧರಣೇಶ ಮಾತನಾಡಿ, ಸನ್ನಡತೆಯುಳ್ಳ ಕೈದಿಗಳ ಬಿಡುಗಡೆಗೆ ರಂಗಕರ್ಮಿಗಳು ಹಾಗೂ ಸಾಹಿತಿಗಳು ಹೋರಾಟ ಮಾಡಬೇಕು ಎಂದು ಮನವಿ ಮಾಡಿದರು.
ಹಿರಿಯ ಸಾಹಿತಿ ಚಂದ್ರಕಾಂತ ಪೋಕಳೆ ಅಧ್ಯಕ್ಷತೆ ವಹಿಸಿದ್ದರು.