ಗುಡಿಬಂಡೆ: ನೂತನ ವರ್ಷದಲ್ಲಿ ಎಲ್ಲರೂ ಒಂದೊಂದು ಗಿಡ ನೆಡುವ ಪ್ರತಿಜ್ಞೆ ಮಾಡಬೇಕು ಎಂದು ಗುಂಪುಮರದ ಆನಂದ್ ಮನವಿ ಮಾಡಿದರು.
ಪಟ್ಟಣದ ವಿನಾಯಕ ನಗರದಲ್ಲಿ ಮಂಗಳವಾರ ರಾತ್ರಿ ಆಯೋಜಿಸಲಾಗಿದ್ದ ಹೊಸ ವರ್ಷ ಆಚರಣೆ ಕಾರ್ಯಕ್ರಮದಲ್ಲಿ ಮನೆ ಮನೆಗೂ ಗಿಡ ಕೊಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ಇದೇ ವೇಳೆ ವಿನಾಯಕ ನಗರದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ನಡೆಯಿತು. 27ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಧನಲಕ್ಷ್ಮಿ (ಪ್ರಥಮ), ಭಾರತಿ (ದ್ವಿತೀಯ), ಸುನೀತಾ (ತೃತೀಯ) ಸ್ಥಾನ ಪಡೆದರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಸಮಾಧಾನಕರ ಬಹುಮಾನವಾಗಿ ಗಿಡಗಳನ್ನು ವಿತರಿಸಲಾಯಿತು. ಪಟ್ಟಣ ಪಂಚಾಯತಿ ಸದಸ್ಯ ದ್ವಾರಕಿನಾಥ ನಾಯ್ದು ಮಾತನಾಡಿದರು.
ಪ.ಪಂ. ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ, ಸದಸ್ಯ ರಾಜಣ್ಣ, ಟಿಪ್ಪುಸುಲ್ತಾನ್ ಸಂಘಟನೆಯ ಶಾಬೂಲ್ ಹಸೇನ್, ವಿನಾಯಕ ನಗರದ ಯುವ ಮುಖಂಡರಾದ ಅನಂತು, ಇಂದ್ರಕುಮಾರ್ ಸಿಂಗ್, ರಘುರಾಮ್, ಸಿದ್ದೇಶ್, ಹರಿಕೃಷ್ಣ, ರಾಮಾಂಜಿನಪ್ಪ, ಲೋಕೇಶ್, ಚಂದ್ರಕುಮಾರ್ ಸಿಂಗ್ ಮತ್ತು ಪರಿಸರ ಸಂರಕ್ಷಣಾ ವೇದಿಕೆಯ ಸದಸ್ಯರು ಇದ್ದರು.