ಹೊಸಕೋಟೆ: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಸಲ್ಲಿಸಿದ್ದ ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನೆ ಗುರುವಾರ ನಡೆಸಲಾಗಿದ್ದು, ಎಲ್ಲ 15 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ಡಾ.ನಟರಾಜ್ ತಿಳಿಸಿದ್ದಾರೆ.
ಕ್ಷೇತ್ರದ ಕೆಜೆಪಿ ಅಭ್ಯರ್ಥಿಯಾಗಿ ಸಯ್ಯದ್ಗೌಸ್ ಅವರ ಹೆಸರನ್ನು ಪಕ್ಷ ಘೋಷಿಸಿತ್ತು. ಆದರೆ, ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಬುಧವಾರ ಗೌಸ್ ಅವರು ಅವಧಿ ಮುಗಿದ ನಂತರ ನಾಮಪತ್ರ ಸಲ್ಲಿಸಲು ಬಂದರು. ಹೀಗಾಗಿ ಅವರ ನಾಮಪತ್ರವನ್ನು ಸ್ವೀಕರಿಸಲಿಲ್ಲ. ಜೆಡಿಎಸ್ ಪಕ್ಷದಿಂದ ವಿ.ಶ್ಯಾಮಣ್ಣ ಅವರನ್ನು ಸಂಭವನೀಯ ಅಭ್ಯರ್ಥಿ ಎಂದು ಪಕ್ಷದ ಮುಖಂಡರು ಒಂದು ವಾರದ ಹಿಂದೆ ಘೋಷಿಸಿದ್ದರು. ಅವರ ಬೆಂಬಲಿಗರು ಇಲ್ಲಿಯ ಹೆದ್ದಾರಿಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದರಲ್ಲದೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ್ದರು. ಕಡೆಗಳಿಗೆಯಲ್ಲಿ ವಿ.ಶ್ರೀಧರ್ ಅವರಿಗೆ ಬಿ ಫಾರಂ ಲಭಿಸಿತು. ಇದರಿಂದ ಬಂಡಾಯವೆದ್ದ ಶ್ಯಾಮಣ್ಣ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಇಂದು ನಾಟಕ
ಹೊಸಕೋಟೆ: ತಾಲ್ಲೂಕಿನ ನಾರಾಯಣಕೆರೆ ಗ್ರಾಮದಲ್ಲಿ ವೀರಾಂಜನೇಯ ಕೃಪಾಪೋಷಿತ ನಾಟಕ ಮಂಡಳಿ ಆಶ್ರಯದಲ್ಲಿ ರಾಮನವಮಿ ಹಬ್ಬದ ಪ್ರಯುಕ್ತ `ಶ್ರೀರಾಮ ಪಟ್ಟಾಭಿಷೇಕ' ಪೌರಾಣಿಕ ನಾಟಕ ಪ್ರದರ್ಶನ ಇದೇ 19ರಂದು ರಾತ್ರಿ 8 ಗಂಟೆಗೆ ನಡೆಯಲಿದೆ.