ಹೊಸನಗರ: ತಾಲ್ಲೂಕಿನಲ್ಲಿ ಅನೇಕ ವರ್ಷಗಳಿಂದ ಕೊರತೆಯ ಪಟ್ಟಿಯಲ್ಲಿರುವ ಮೊರಾರ್ಜಿ ವಸತಿಶಾಲೆ ಮಂಜೂರು ಮಾಡಿಸುವ ಎಲ್ಲಾ ಪ್ರಯತ್ನ ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಭರವಸೆ ನೀಡಿದರು.ಬುಧವಾರ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
6ನೇ ವೇತನ ಆಯೋಗ ರಚನೆ ಕುರಿತಂತೆ ಸರ್ಕಾರದೊಂದಿಗೆ ಚರ್ಚೆ ನಡೆಯುತ್ತಿದ್ದು, ಸದ್ಯದಲ್ಲಿಯೇ ರಚನೆ ಆಗಲಿದೆ. ಅಲ್ಲಿಯತನಕ ಮಧ್ಯಂತರ ಆದೇಶ ನೀಡುವುದಾಗಿ ತಿಳಿಸಿದರು.
ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜು ಶಿಕ್ಷಕರ ವೇತನ ತಾರತಮ್ಯದ ಅಂತರ ಕಡಿಮೆ ಮಾಡುವ ದಿಕ್ಕಿನಲ್ಲಿ ಸರ್ಕಾರ ಪ್ರಯತ್ನ ಮಾಡುತ್ತಿದೆ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹಾಗೂ ಪ್ರೌಢಶಾಲೆಯ ಮುಖ್ಯ ಶಿಕ್ಷಕರ ನೇರ ನೇಮಕಾತಿಗೆ ಮೊದಲು ಸೇವಾ ಹಿರಿತನಕ್ಕೆ ಮೊದಲ ಆದ್ಯತೆ ನೀಡುವ ಭರವಸೆ ನೀಡಿದರು.
ಈ ಬಾರಿಯ ಬಜೆಟ್ನಲ್ಲಿಯೂ ಸಹ ಶಿಕ್ಷಣ ಕ್ಷೇತ್ರಕ್ಕೆ ಶೇಕಡಾವಾರು ಹೆಚ್ಚು ಅನುದಾನ ಮೀಸಲಾಗಿಡಲು ಸರ್ಕಾರಕ್ಕೆ ಶಿಕ್ಷಣ ಕ್ಷೇತ್ರದ ಪರವಾಗಿ ಒತ್ತಾಯಿಸುವುದಾಗಿ ಅವರು ಹೇಳಿದರು.
ಬೈಸಿಕಲ್ ಖರೀದಿಯಲ್ಲಿ ಅವ್ಯವಹಾರ ಆಗಿಲ್ಲ. ವಿರೋಧಿಗಳು ಸಮಗ್ರ ತನಿಖೆ ನಡೆಸಲಿ ಎಂದು ಬೈಸಿಕಲ್ ವಿತರಣಾ ಸಮಿತಿ ಸದಸ್ಯನಾಗಿ ವಿಷಯ ಪ್ರಸ್ತಾಪಿಸಿದರು.
ಸಭೆಯಲ್ಲಿ ಪ್ರೌಢಶಾಲಾ ಶಿಕ್ಷಕ ಸಂಘದ ತಾಲ್ಲೂಕು ಅಧ್ಯಕ್ಷ ಅಧ್ಯಕ್ಷ ಕೆ.ಎನ್. ರತ್ನಾಕರ್, ಮುಖಂಡರಾದ ಉಮೇಶ್ ಕಂಚುಗಾರ್, ಎನ್.ಆರ್. ದೇವಾನಂದ್, ವಾಟಗೋಡು ಸುರೇಶ್, ವಾಲೆಮನೆ ಶಿವಕುಮಾರ್, ಎ.ವಿ. ಮಲ್ಲಿಕಾರ್ಜುನ ಹಾಜರಿದ್ದರು. ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುಮೂರ್ತಿ ಸ್ವಾಗತಿಸಿದರು.