ಹೊಸಪೇಟೆ:ನಗರದಲ್ಲಿ ಆದಾಯ ತೆರಿಗೆ ಅಧಿಕಾರಿಗಳ ಕಾರ್ಯಾಚರಣೆ ಬುಧವಾರವೂ ಮುಂದುವರಿದಿದೆ. ಈ ಹಿಂದೆ ದಾಳಿಗೊಳಗಾಗಿದ್ದ ಡ್ರೀಮ್ ಲಾಜಿಸ್ಟಿಕ್ಸ್ ಕಚೇರಿ ಸೇರಿದಂತೆ ಅದರ ಪಾಲುದಾರರ ಮನೆಗೆ ತೆರಳಿದ ಅಧಿಕಾರಿಗಳು, ವಾರಸುದಾರರ ಸಮಕ್ಷಮದಲ್ಲಿ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಆದಾಯ ತೆರಿಗೆ ಇಲಾಖೆಯ ಬೆಳಗಾವಿ ಅಧಿಕಾರಿಗಳಾದ ರಾಜಶೇಖರನ್ ಮತ್ತು ಕಿರಣ ನೇತೃತ್ವದಲ್ಲಿ ಲಾಜೆಸ್ಟಿಕ್ಸ್ ಕಚೇರಿ ಮತ್ತು ಪಾಲುದಾರರ ಮನೆಗೆ ತೆರಳಿದ ಅಧಿಕಾರಿಗಳು, ಈ ಹಿಂದೆ ವಶಕ್ಕೆ ತೆಗೆದುಕೊಂಡಿದ್ದ ಮಹತ್ವದ ದಾಖಲೆಗಳನ್ನು ಸಾಕ್ಷಿದಾರರ ಸಮಕ್ಷಮದಲ್ಲಿ ವಶಪಡಿಸಿಕೊಂಡಿದ್ದಾರೆ.
ದಾಳಿಯ ಸಂದರ್ಭದಲ್ಲಿ ಪಾಲುದಾರರಾದ ಪ್ರಕಾಶ ಹೆಗಡೆ ಊರಲ್ಲಿರಲಿಲ್ಲ. ಆದ್ದರಿಂದ ದಾಖಲೆಗಳನ್ನು ಜಪ್ತಿಮಾಡಿ ಇಡಲಾಗಿತ್ತಾದರೂ ವಶಕ್ಕೆ ತೆಗೆದುಕೊಂಡಿರಲಿಲ್ಲ. ಬುಧವಾರ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ನಗರಕ್ಕೆ ಆಗಮಿಸಿದ್ದು ದಾಖಲೆಗಳನ್ನು ವಶಪಡಿಸಿಕೊಳ್ಳುವ ಕಾರ್ಯ ನಡೆಸಿದೆ. ಇವರ ಬ್ಯಾಂಕ್ ಖಾತೆಗಳು ಹಾಗೂ ಕಚೇರಿಯಲ್ಲಿ ಕೆಲ ದಾಖಲೆಗಳನ್ನು ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.