ಕಿಕ್ಕೇರಿ: ತ್ಯಾಜ್ಯ ವಸ್ತುಗಳಿಂದ ತುಂಬಿ ನಿಷ್ಪ್ರಯೋಜಕವಾಗಿದ್ದ ಹೊಸಬೀದಿಯ ತೆರೆದ ಬಾವಿಯನ್ನು ಬಡಾವಣೆಯ ನಿವಾಸಿಗಳು ಶುಚಿಗೊಳಿಸಿದರು.
ಈಚೆಗೆ ಬೇಸಿಗೆಯ ಬಿಸಿಲಿನಿಂದ ಕೊಳವೆ ಬಾವಿ ಬತ್ತಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿತ್ತು. ಆದರೆ ತ್ಯಾಜ್ಯಗಳಿಂದ ತುಂಬಿದ್ದ ಬಾವಿಯ ನೀರನ್ನು ಉಪಯೋಗಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಡಾವಣೆಯ ನಿವಾಸಿಗಳು ಬಾವಿಯ ಶುಚಿತ್ವಕ್ಕೆ ಮುಂದಾದರು.
ಮನೆಯಲ್ಲಿ ಮೂಲೆಗೆ ಸೇರಿದ್ದ ಹಗ್ಗ, ರಾಟೆಯನ್ನು ಹೊರತೆಗೆದರು. ಮರಿಯನಹೊಸೂರಿನ ರಾಜೇಶ ಅವರನ್ನು ಕರೆಯಿಸಿ ಬಾವಿಗೆ ಇಳಿಸಿದರು. ಬಾವಿಯಲ್ಲಿದ್ದ ಚಪ್ಪಲಿ, ಮರ, ಕಸ, ಪ್ಲಾಸ್ವಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಹೊರಹಾಕಿದರು.
`ಈಗ ಬಾವಿ ಶುಚಿಗೊಂಡಿದೆ. ಮಳೆಯ ನೀರನ್ನು ಹರಿದು ಹೋಗದಂತೆ ತಡೆಗಟ್ಟಿ ಬಾವಿಗೆ ಇಳಿಸಬೇಕು. ಇದರಿಂದ ಅಂತರ್ಜಲ ವೃದ್ಧಿಯಾಗಿ ನೀರಿನ ಕ್ಷಾಮಕ್ಕೆ ಪರಿಹಾರ ದೊರೆಯುತ್ತದೆ' ಎಂದು ಕೆಲವರು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜೇಶ್, ಸ್ವಾಮಿ, ವೇಲಾಪುರಿಶೆಟ್ಟಿ, ಹನುಮಂತಶೆಟ್ಟಿ, ದೊಡ್ಡಯ್ಯಶೆಟ್ಟಿ ಇತರರು ಪಾಲ್ಗೊಂಡಿದ್ದರು.