ಮಂಗಳೂರು: ನಗರದ ಪಡೀಲ್ನ `ಮಾರ್ನಿಂಗ್ ಮಿಸ್ಟ್~ ಹೋಂ ಸ್ಟೇ ಮೇಲೆ ಕಳೆದ ಶನಿವಾರ ದಾಳಿ ಮಾಡಿ ಯುವತಿಯರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ನಲ್ಲಿ ದಾಖಲಾಗದ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಕಂಡುಬಂದಿದೆ.
ರಾಜ್ಯ ಮಹಿಳಾ ಆಯೋಗದಿಂದ ತೀವ್ರ ಆಕ್ಷೇಪಕ್ಕೆ ಗುರಿಯಾಗಿರುವ ಪೊಲೀಸರು ಇದೀಗ ತಪ್ಪನ್ನು ತಿದ್ದಿಕೊಳ್ಳಲು ಹೊರಟಿದ್ದು, ನೇರವಾಗಿ ದಾಳಿಯಲ್ಲಿ ತೊಡಗದೆ ಇದ್ದರೂ ಈ ಘಟನೆಯನ್ನು ನೋಡಿಯೂ ರಕ್ಷಣೆಗೆ ಮುಂದಾಗದ ಇತರ ಹಲವರನ್ನು ಬಂಧಿಸುವ ನಿರೀಕ್ಷೆ ಇದೆ.
`ಎಫ್ಐಆರ್ ದಾಖಲಾದ 27 ಮಂದಿಯ ಪೈಕಿ ಈಗಾಗಲೇ 22 ಮಂದಿಯನ್ನು ಬಂಧಿಸಲಾಗಿದೆ. ವಿಡಿಯೊ ದೃಶ್ಯಗಳನ್ನು ಆಧರಿಸಿ ಇನ್ನೂ ಹಲವರನ್ನು ಬಂಧಿಸುವ ಚಿಂತನೆ ನಡೆಸಲಾಗುತ್ತಿದೆ~ ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಶುಕ್ರವಾರ `ಪ್ರಜಾವಾಣಿ~ಗೆ ತಿಳಿಸಿದರು.
ವದಂತಿ: ಹಲ್ಲೆಗೊಳಗಾದ ಯುವತಿಯರ ಪೈಕಿ ಒಬ್ಬಾಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂಬ ವದಂತಿ ಶುಕ್ರವಾರ ಸಂಜೆ ನಗರದಲ್ಲಿ ವ್ಯಾಪಿಸಿತ್ತು. ಆದರೆ ಅಂತಹ ಯಾವುದೇ ಪ್ರಸಂಗವೂ ನಡೆದಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು.
ಈ ಮಧ್ಯೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ.ಮಂಜುಳಾ ಅವರು ಬೆಂಗಳೂರಿನಿಂದ ದೂರವಾಣಿಯಲ್ಲಿ `ಪ್ರಜಾವಾಣಿ~ಯನ್ನು ಸಂಪರ್ಕಿಸಿ, ಮಂಗಳೂರಿನಲ್ಲಿ ನಡೆದ ಘಟನೆಯಿಂದ ಸರ್ಕಾರ ಆಘಾತಗೊಂಡಿದೆ. ಗೃಹ ಸಚಿವರ ಸಹಿತ ಎಲ್ಲಾ ಸಚಿವರು, ಶಾಸಕರೂ ಹಲ್ಲೆ ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.