ಮೈಸೂರು: ನಗರದಿಂದ ಹೊರಕ್ಕೆ ಎಕ್ಸೆಲ್ ಪ್ಲಾಂಟ್ ಅನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಎಕ್ಸೆಲ್ ಪ್ಲಾಂಟ್ ವಿರುದ್ಧ ಹೋರಾಟ ಸಮಿತಿಯು ಜೂನ್ 1 ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಜೆ.ಪಿ.ನಗರದ ಗೇಟಿನ ಬಳಿ ಪ್ರತಿಭಟನೆ ನಡೆಯಲಿದೆ.
ಈ ಪ್ಲಾಂಟ್ ನಗರದ ವಿದ್ಯಾರಣ್ಯಪುರಂ, ಚಾಮುಂಡಿಪುರಂ, ವಿಶ್ವೇಶ್ವರನಗರ, ಜೆ.ಪಿ. ನಗರ ಮತ್ತಿತರ ಪ್ರದೇಶಗಳ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಮೀಪದ ನಾಗರಿಕರು ದಿನವೂ ಕೆಟ್ಟ ವಾಸನೆ ಸಹಿಸಿಕೊಳ್ಳುತ್ತಿದ್ದಾರೆ. ವಿಷಯುಕ್ತ ಗಾಳಿ ಸೇವನೆಯಿಂದ ವಾಂತಿ-ಭೇದಿ ಕಾಣಿಸಿಕೊಂಡಿದೆ.
ಸಾಂಕ್ರಾಮಿಕ ರೋಗ ಹರಡುವ ಭೀತಿ ಈ ಭಾಗದ ಜನರಲ್ಲಿ ಆವರಿಸಿದೆ. ರೋಗ ಬರುವುದಕ್ಕೆ ಮುನ್ನವೇ ಇದನ್ನು ತಡೆಯುವುದು ಎಲ್ಲರ ಜವಾಬ್ದಾರಿ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಹೇಳಿದರು.
1997ರಲ್ಲಿ ಆರಂಭವಾದ ಎಕ್ಸೆಲ್ ಪ್ಲಾಂಟ್ 50-100 ಟನ್ ಕಸ ಸಂಸ್ಕರಿಸುವ ಸಾಮರ್ಥ್ಯ ಹೊಂದಿತ್ತು. ಈಗ ದಿನಕ್ಕೆ 250-300 ಟನ್ ಕಸ ಬರುತ್ತಿದೆ. ಇದನ್ನು ವಿಲೇವಾರಿ ಮಾಡಲು ಆಧುನಿಕ ಸೌಲಭ್ಯಗಳಿಲ್ಲ.
ಘನತ್ಯಾಜ್ಯ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ರೂ. 11 ಕೋಟಿ ಬಿಡುಗಡೆ ಮಾಡಿದೆ. ಇಷ್ಟೊಂದು ಮೊತ್ತದ ಹಣವಿದ್ದರೂ ಎಕ್ಸೆಲ್ ಪ್ಲಾಂಟ್ನಿಂದ ಹೊರ ಬರುವ ವಿಷಪೂರಿತ ಗಾಳಿ ತಡೆಯಲು ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ತ್ಯಾಜ್ಯದಿಂದ ಹೊರ ಬರುವ ಮಿಥೇನ್ ಅನಿಲ ಹೊರ ಹೋಗಲು ಎತ್ತರದ ಕೊಳವೆ ಅಳವಡಿಸಿಲ್ಲ. ಪ್ಲಾಂಟ್ ಸಮೀಪ ಶಾಲೆ, ಕಾಲೇಜು ಹಾಗೂ ಸಾವಿರಾರು ಜನ ವಾಸವಾಗಿದ್ದಾರೆ. ಅವರೆಲ್ಲರಿಗೂ ಇದರಿಂದ ಅಪಾರ ಎದುರಾಗಿದೆ. ಪ್ಲಾಂಟ್ನ ಅವೈಜ್ಞಾನಿಕ ನಿರ್ವಹಣೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಕ್ಸೆಲ್ ಪ್ಲಾಂಟ್ ವಿರುದ್ಧ ಹೋರಾಟ ಸಮಿತಿಯ ಡಾ. ಚಂದ್ರಶೇಖರ್, ಎಚ್. ಎನ್. ನವೀನ್, ಎಚ್.ಎಸ್. ಜಗನ್ನಾಥ್, ಸುನೀಲ್ ಇದ್ದರು.