ಬೆಂಗಳೂರು: ‘ರೈತರ ಜಮೀನು ಲಪಟಾಯಿಸಿ,ಡಿನೋಟಿಫಿಕೇಷನ್ ಮೂಲಕ ರಿಯಲ್ ಎಸ್ಟೇಟ್ ದಂಧೆ ನಡೆಸಿದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಹೋರಾಟಗಾರರನ್ನು ಜೈಲಿಗೆ ತಳ್ಳಲಾಗುತ್ತಿದೆ. ಇದು ರಾಜ್ಯದ ದುರಂತ’ ಎಂದು ನಿವೃತ್ತ ಪೊಲೀಸ್ ಬಿ.ಕೆ. ಶಿವರಾಂ ಹೇಳಿದರು.
ನಗರದ ಪ್ರದೇಶ ಕುರುಬರ ಸಂಘದ ಕನಕ ಸಭಾಂಗಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯು ಆಯೋಜಿಸಿದ್ದ ‘ಭೂಸ್ವಾಧೀನ ಮತ್ತು ಭವಿಷ್ಯದ ಅನ್ನದಾತರು’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಜನೋಪಕಾರಿ ಯೋಜನೆಗಳಿಗಾಗಿ ಸರ್ಕಾರ ನಡೆಸುವ ಭೂ ಸ್ವಾಧೀನಕ್ಕೆ ಜನರು,ರೈತರು ಸ್ಪಂದಿಸಿದ್ದಾರೆ.ಅಣೆಕಟ್ಟೆ ಕಟ್ಟಲು ಹಲವು ಗ್ರಾಮಸ್ಥರು ತಮ್ಮ ಮನೆಮಠಗಳನ್ನು ತೊರೆದಿರುವುದು ಇದಕ್ಕೆ ಉದಾಹರಣೆ. ಆದರೆ, ರಾಜಕೀಯ ಮುಖಂಡರು ಸ್ವಾಧೀನ ಪಡಿಸಿಕೊಂಡ ಜಮೀನನ್ನು ಡಿನೋಟಿಫೈ ಮಾಡಿ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದಾರೆ.ಕೆಐಎಡಿಬಿ ಭೂ ಹಗರಣ ಇದಕ್ಕೊಂದು ಉದಾಹರಣೆ’ ಎಂದು ಆರೋಪಿಸಿದರು.
ಅಧ್ಯಕ್ಷತೆಯನ್ನು ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ಗೌಡ ವಹಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯ ರಾಜಣ್ಣ, ಗಾರ್ಮೆಂಟ್ಸ್ ಅಂಡ್ ಟೆಕ್ಸ್ಟೈಲ್ಸ್ ವರ್ಕರ್ಸ್ ಯೂನಿಯನ್ ಉಪಾಧ್ಯಕ್ಷ ಕೆ.ಆರ್.ಜಯರಾಂ, ಕರ್ನಾಟಕ ರಾಜ್ಯ ಕುಕ್ಕೂಟ ಮಹಾಮಂಡಳಿಯ ಮಾಜಿ ಅಧ್ಯಕ್ಷ ಡಿ.ಕೆ. ಕಾಂತರಾಜ್, ಇತರರು ಉಪಸ್ಥಿತರಿದ್ದರು.