ಕಾರವಾರ: ವಿಧಾನಸಭೆ ಚುನಾವಣೆಯನ್ನು ವ್ಯವಸ್ಥಿತ ಹಾಗೂ ಶಾಂತಿಯುವಾಗಿ ನಡೆಸಲು ಎಲ್ಲಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಇಮ್ಕೊಂಗ್ಲಾ ಜಮೀರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ನಡೆದ ಚುನಾವಣಾ ವೀಕ್ಷಕರು ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳ ಸಭೆಯಲ್ಲಿ ಚುನಾವಣಾ ಸಿದ್ಧತೆಗಳ ಕುರಿತು ಅವರು ಮಾತನಾಡಿದರು.
ಅಕ್ರಮಗಳ ಮೇಲೆ ನಿಗಾ: ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ. 26 ಫ್ಲೈಯಿಂಗ್ ಸ್ಕ್ವಾಡ್, ಸೆಕ್ಟರ್ ಅಧಿಕಾರಿಗಳು, ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು.
`ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಹಳಿಯಾಳ ತಾಲ್ಲೂಕಿನಲ್ಲಿ ್ಙ 20 ಲಕ್ಷ ಹಾಗೂ ಸಿದ್ದಾಪುರ ತಾಲೂಕಿನಲ್ಲಿ ಮೂರು ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಸುಮಾರು ್ಙ 5.35 ಲಕ್ಷ ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದ್ದು, 15 ಪ್ರಕರಣಗಳನ್ನು ದಾಖಲಿಸಲಾಗಿದೆ' ಎಂದರು.
`ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಏಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಎರಡು `ಕಾಸಿಗಾಗಿ ಸುದ್ದಿ' ಪ್ರಕರಣಗಳಲ್ಲಿ ಅಭ್ಯರ್ಥಿಗೆ ನೋಟಿಸ್ ಜಾರಿಗೊಳಿಸಲಾಗಿದೆ' ಎಂದು ಅವರು ಜಮೀರ್ ತಿಳಿಸಿದರು.
ಅಂಚೆ ಮತದಾನ: `ಈ ಬಾರಿ ಉಂಗುರ ಬೆರಳಿಗೆ ಮತದಾನದ ಶಾಯಿ ಹಾಕಲು ಚುನಾವಣಾ ಆಯೋಗ ಸೂಚನೆ ನೀಡಿದೆ. ಇದೇ ರೀತಿ ಮತದಾನ ಮಾಡಲು ಗುರುತಿಗಾಗಿ ಆಧಾರ ಕಾರ್ಡ್ ಸೇರಿದಂತೆ 23 ಗುರುತಿನ ಚೀಟಿಗಳನ್ನು ಆಯೋಗ ಗುರುತಿಸಿದೆ' ಎಂದು ನುಡಿದರು.
ಕರ್ತವ್ಯಕ್ಕೆ ತಪ್ಪದೇ ಹಾಜರಾಗಬೇಕು: `ಈಗಾಗಲೇ ಆರ್ಒ, ಎಆರ್ಒ, ಸೆಕ್ಟರ್ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಮತಗಟ್ಟೆ ಅಧಿಕಾರಿಗಳಿಗೆ ಏ. 25ಮತ್ತು 29ರಂದು ತರಬೇತಿ ನೀಡಲಾಗುವುದು. 861 ಮೈಕ್ರೋ ವೀಕ್ಷಕರಿಗೆ ಏ. 30ರಂದು ತರಬೇತಿ ಆಯೋಜಿಸಲಾಗಿದೆ.
ಮೊದಲ ಹಂತದ ರ್ಯಾಂಡಮೈಶೇಷನ್ ಈಗಾಗಲೇ ಮುಕ್ತಾಯಗೊಂಡಿದ್ದು, ಎರಡನೇ ಹಂತವನ್ನು ಇಂದು ಮಾಡಲಾಗುವುದು. ಚುನಾವಣಾ ಕರ್ತವ್ಯದ ಜವಾಬ್ದಾರಿ ಪಡೆದವರು ಕಡ್ಡಾಯವಾಗಿ ತಪ್ಪದೇ ಕರ್ತವ್ಯಕ್ಕೆ ಹಾಜರಾಗಬೇಕು. ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ಮೂಲಸೌಲಭ್ಯಗಳನ್ನು ಒದಗಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು' ಎಂದು ತಿಳಿಸಿದರು.
ಸೂಕ್ತ ಭದ್ರತೆ: `ಚುನಾವಣೆ ಹಾಗೂ ಮತದಾನದ ದಿನದಂದು ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಶಾಂತಿಯುತವಾಗಿ ಮತದಾನ ನಡೆಸಲು ಸೂಕ್ತ ಬಂದೋಬಸ್ತಿಗೆ ಕ್ರಮ ಕೈಗೊಳ್ಳಲಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ ತಿಳಿಸಿದರು.
`ಚುನಾವಣಾ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ 923 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. 37 ರೌಡಿ ಪರೇಡ್ ನಡೆಸಲಾಗಿದೆ. ಜಿಲ್ಲೆಯಲ್ಲಿ 7140 ಪರವಾನಿಗೆ ಪಡೆದ ಆಯುಧಗಳು ಇದ್ದು, ಇವುಗಳ ಪೈಕಿ 6999 ಆಯುಧಗಳನ್ನು ಸುಪರ್ಧಿಗೆ ಪಡೆದುಕೊಳ್ಳಲಾಗಿದೆ' ಎಂದರು.
`ಜಿಲ್ಲೆಯಲ್ಲಿ 896 ಜಾಮೀನು ರಹಿತ ವಾರೆಂಟ್ಗಳನ್ನು ಜಾರಿಗೊಳಿಸಲಾಗಿದ್ದು, ಇನ್ನು 669 ಪ್ರಕರಣಗಳು ಬಾಕಿಯಿವೆ. ಹೊಸದಾಗಿ 547 ಪ್ರಕರಣಗಳನ್ನು ಸ್ವೀಕರಿಸಲಾಗಿದೆ.
587 ಸಮಾಜಘಾತುಕ ವ್ಯಕ್ತಿಗಳ ವಿರುದ್ಧ ಒಟ್ಟು 381 ಪ್ರಕರಣಗಳನ್ನು ದಾಖಲಿಸಲಾಗಿದೆ' ಎಂದರು.ಸಭೆಯಲ್ಲಿ ಚುನಾವಣಾ ವೀಕ್ಷರಾದ ಶ್ರೀಧರ ಚಿಟ್ಟೂರಿ, ಎಂ.ಕರುಣಾಕರನ್, ಎಂ.ಚಕ್ರವರ್ತಿ, ಪರಮಜಿತ ಕೌರ್, ಅಕೀಲೇಶ್ ಶರ್ಮಾ, ಎಂ.ಕೆ.ಎಸ್ ಸುಂದರಂ, ಖರ್ಚು ವೆಚ್ಚದ ವೀಕ್ಷಕರಾದ ಎಂ.ಎನ್.ಮೂರ್ತಿ, ಬಿಪಿನ್ ಸಿ.ಎನ್, ಪೊಲೀಸ್ ವೀಕ್ಷಕರಾದ ಸಂಜಯಕುಮಾರ ವರ್ಮಾ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಸುಬ್ರಾಯ ಕಾಮತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಭಾಷ್ ಗುಡಿಮನಿ, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.