ರಾಯಚೂರು: ಜಿಲ್ಲೆಯಲ್ಲಿ 1,000 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗುತ್ತಿದ್ದು, ರಾಜ್ಯ ಸರ್ಕಾರವು ಭೂ ಸೇನಾ ನಿಗಮಕ್ಕೆ ಈ ಕಾಮಗಾರಿ ವಹಿಸಿಕೊಟ್ಟಿದೆ. ಈ ಕಾಮಗಾರಿ ಬೇಗ ಪೂರ್ಣಗೊಳಿಸುವ ಭರವಸೆ ಇದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮುದ್ದುಮೋಹನ್ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ. ಆರ್ಸೆನಿಕ್, ಫ್ಲೋರೈಡ್ಯುಕ್ತ ನೀರು ಹೊಂದಿರುವಂಥ ಗ್ರಾಮಗಳಲ್ಲಿ ಈಗಾಗಲೇ 40 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ರೂ 2 ಕ್ಕೆ 20 ಲೀಟರ್ ನೀರು ಪಡೆಯುತ್ತಿದ್ದಾರೆ. ಬಹುತೇಕ ಘಟಕಗಳು ಕಾರ್ಯ ನಿರ್ವಹಿಸುತ್ತವೆ. ಎಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದರ ಬಗ್ಗೆ ದೂರುಗಳು ಬಂದಿಲ್ಲ. ಬಂದರೆ ತುರ್ತಾಗಿ ಸರಿಪಡಿಸಲಾಗುತ್ತದೆ ಎಂದು ಹೇಳಿದರು.
ಉದ್ಯೋಗ ಖಾತರಿ ಯೋಜನೆ ಸಾಧನೆ: ರಾಯಚೂರು ಜಿಲ್ಲೆಯಲ್ಲಿ 2013–14ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 2, 43,517 ಲಕ್ಷ ಕುಟುಂಬಗಳಿಗೆ ಉದ್ಯೋಗ ಚೀಟಿ ಕೊಡಲಾಗಿದೆ. 13 ಲಕ್ಷ ಉದ್ಯೋಗ ಮಾನವ ದಿನ ಸೃಜಿಸಲಾಗಿದೆ. ಒಟ್ಟು ರೂ70.36 ಕೋಟಿ ಅನುದಾನ ಲಭ್ಯವಿತ್ತು. ಇದರಲ್ಲಿ ರೂ 57.61 ಕೋಟಿ ಕಾಮಗಾರಿಗೆ ವಿನಿಯೋಗಿ-ಸಲಾಗಿದೆ ಎಂದು ಹೇಳಿದರು.
2013–14ರಲ್ಲಿ ಯೋಜನೆಯಡಿ ಬಾಕಿ ಇರುವ ಮೊತ್ತ ರೂ 2.60 ಕೋಟಿ ಇದೆ. 2012–13ರಲ್ಲಿನ ಪಾವತಿಗೆ ಬಾಕಿ ಇರುವ ಮೊತ್ತ ರೂ 6.81 ಕೋಟಿ ಇದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಗ್ರಾಮ ಸಭೆ, ವಾರ್ಡ್ ಸಭೆ ನಡೆಸಿ ಕಾಮಗಾರಿ ಕೈಗೊಳ್ಳಲಾಗಿದೆ. ನಮ್ಮ ಹೊಲ ನಮ್ಮ ದಾರಿ ಕಾರ್ಯಕ್ರಮವನ್ನು ಗ್ರಾಮೀಣ ಸರ್ವ ಋತು ಸಂಪರ್ಕ ಕಾರ್ಯಕ್ರಮದಡಿ ಈಗಾಗಲೇ 12 ಕಾಮಗಾರಿ ಆರಂಭಿಸಲಾಗಿದೆ. ತೋಟಗಾರಿಕೆ, ಜಲಾನಯನ ಇತ್ಯಾದಿ ಕಾಮಗಾರಿಗಳನ್ನು ಎಸ್ಸಿಎಸ್ಟಿ, ಸಣ್ಣ, ಅತೀ ಸಣ್ಣ ರೈತರಿಗೆ ಹಾಗೂ ಇತರ ಅರ್ಹ ವ್ಯಕ್ತಿಗಳ ಫಲಾನುಭವಿಗಳ ಜಮೀನುಗಳಲ್ಲಿ ಒಟ್ಟು 436 ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಉದ್ಯೋಗ ಖಾತರಿ ಯೋಜನೆಯಡಿ ಜಿ.ಪಂ ವ್ಯಾಪ್ತಿಗೆ ಬರುವ 260 ಕೆರೆಗಳಲ್ಲಿ ಒಟ್ಟು 101 ಕೆರೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ 9 ಕಾಮಗಾರಿಗಳು ಈಗ ವಿವಿಧ ಹಂತದಲ್ಲಿವೆ. ಸಣ್ಣ ನೀರಾವರಿ ಕೆರೆಗಳ ಪುನಶ್ಚೇತನಕ್ಕೆ ಈ ವರ್ಷದಲ್ಲಿ 35 ಕಾಮಗಾರಿ ತೆಗೆದುಕೊಳ್ಳಲಾಗುತ್ತದೆ. ಅರಣ್ಯ, ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 1,434 ಕಾಮಗಾರಿಗಳನ್ನು ಆರಂಭಿಸಲಾಗಿದೆ.
ಅದೇ ರೀತಿ 135 ಆಟದ ಮೈದಾನ ಕಾಮಗಾರಿ ಆಯ್ಕೆ ಮಾಡಿದ್ದು, ಇದರಲ್ಲಿ 9 ಕಾಮಗಾರಿ ಆರಂಭಿಸಲಾಗಿದೆ ಎಂದು ಹೇಳಿದರು.
5 ಕೋಟಿ ಬಾಕಿ: ಜಿಲ್ಲೆಯ ಮಾನ್ವಿ ಮತ್ತು ದೇವದುರ್ಗ ತಾಲ್ಲೂಕಿನಲ್ಲಿ ಹೆಚ್ಚು ಪಾವತಿಗೆ ಬಾಕಿ ಹಣ ಉಳಿದಿದೆ. ಬ್ಯಾಂಕ್ ಖಾತೆ ಹೊಂದಿರದೇ ಇದ್ದುದ್ದೇ ಇದಕ್ಕೆ ಕಾರಣವಾಗಿದೆ. ಹೀಗಾಗಿ ಬ್ಯಾಂಕ್ ಖಾತೆಯುಳ್ಳವರಿಗೆ ಮಾತ್ರ ಹಣ ಪಾವತಿ ಮಾಡಲಾಗುವುದು. ಈ ಬಗ್ಗೆ ಸಂಬಂಧಪಟ್ಟವರಿಗೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಎಸ್ಸಿಎಸ್ಟಿ ಕುಟುಂಬಗಳ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣಕ್ಕಾಗಿ ರೂ 15 ಸಾವಿರ ಪ್ರೋತ್ಸಾಹಧನ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಈ ಯೋಜನೆಯಡಿ ಎಲ್ಲ ಬಿಪಿಎಲ್ ಮತ್ತು ನಿರ್ಬಂಧಿತ ಎಪಿಎಲ್ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹ ಧನ ಪಡೆಯಲು ಅರ್ಹರಾಗಿರುತ್ತಾರೆ ಎಂದು ವಿವರಿಸಿದರು.
ಇಬ್ಬರು ಪಿಡಿಒ ವಿರುದ್ಧ ಕ್ರಮ: ಪಲಕನಮರಡಿ ಗ್ರಾಮ ಪಂಚಾಯಿತಿಯಲ್ಲಿ ವಸತಿ ಯೋಜನೆಯಡಿ ಹಣ ದುರ್ಬಳಕೆ ಪ್ರಾಥಮಿಕ ತನಿಖೆಯಿಂದ ತಿಳಿದಿದೆ. ಪತ್ತೆಪ್ಪ ರಾಠೋಡ, ಶಿವಣ್ಣ ಎಂಬುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಯೋಜನಾಧಿಕಾರಿ ಶರಣಬಸವ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.