ಹಾವೇರಿ: ‘ಅಂಗವಿಕಲರು ಅಂಗವೈಕಲ್ಯತೆಯನ್ನು ಮರೆತು ಎಲ್ಲರಂತೆ ನಾವು ಎಂಬ ಭಾವನೆ ಬೆಳೆಸಿಕೊಂಡಾಗ ಮಾತ್ರ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ’ ಎಂದು ಹೊಸಮಠದ ಬಸವಶಾಂತಲಿಂಗ ಶ್ರೀಗಳು ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ, ಅಂಗವಿಕಲರ ಕಲ್ಯಾಣ ಇಲಾಖೆ, ಜಿಲ್ಲಾ ಅಂಗವಿಕಲರ ಸಂಘ, ಜಿಲ್ಲಾ ಅಂಗವಿಕಲರ ನೌಕರರ ಸಂಘ ಮತ್ತು ಎಸ್ಜೆಎಂ ದೈಹಿಕ ಅಂಗವಿಕಲರ ವಸತಿ ಪ್ರೌಢಶಾಲೆ ಆಶ್ರಯದಲ್ಲಿ ಶುಕ್ರವಾರ ನಗರದ ಹೊಸಮಠದಲ್ಲಿ ನಡೆದ ವಿಕಲಚೇತನರ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿಕಲಚೇತರಿಗೆ ಸಾಂಕೇತಿಕವಾಗಿ ಟ್ರೈಸಿಕಲ್ ವಿತರಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ನಂಬಿಕೆ, ವಿಶ್ವಾಸ, ಆತ್ಮಸ್ಥೈರ್ಯ ಅಗತ್ಯ ಎಂಬುವುದನ್ನು ಅಂಗವಿಕಲರು ಅರಿತುಕೊಳ್ಳಬೇಕು. ಕೆಲವು ಅಂಗವಿಕಲರು ಎಲ್ಲ ಸರಿಯಾಗಿದ್ದ ವ್ಯಕ್ತಿಗಳಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ. ಅಂತವರ ಸಾಧನೆಯೇ ಉಳಿದವರಿಗೆ ಸ್ಫೂರ್ತಿಯಾಗಬೇಕು ಎಂದರು.
ಧಾರವಾಡ ಸಮರ್ಥನಂ ಅಂಗವಿಕಲರ ಸಂಸ್ಥೆ ಸಂಪನ್ಮೂಲ ವ್ಯಕ್ತಿ ಪ್ರವೀಣ ಕಡಿಬಾಗಿಲ ಮಾತನಾಡಿ, ನಮ್ಮ ಸಂಸ್ಥೆಯಿಂದ ಅಂಗವಿಕಲರಿಗೆ ಮೂರು ತಿಂಗಳಿಗೊಮ್ಮೆ ಉಚಿತ ಕಂಪ್ಯೂಟರ್ ತರಬೇತಿ, ವಿವಿಧ ವೃತ್ತಿ ಕೌಶಲ್ಯ ತರಬೇತಿ ನೀಡುವುದರ ಜತೆಗೆ ಉದ್ಯೋಗ ಅವಕಾಶ ಒದಗಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ಟ್ರೈಸಿಕಲ್ ಹಾಗೂ ಕ್ರೀಡಾಕೂಟದಲ್ಲಿ ವಿಜೇತ ಅಂಗವಿಕಲ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.
ಅಂಗವಿಕಲರ ಸಂಘದ ಜಿಲ್ಲಾ ಅಧ್ಯಕ್ಷ ಪುಟ್ಟಪ್ಪ ಜಲದಿ ಅಧ್ಯಕ್ಷತೆ ವಹಿಸಿದ್ದರು. ಅಲ್ಲಾಭಕ್ಷ, ಮೌನೇಶ ಬಡಿಗೇರ, ಬಾಲಕೃಷ್ಣ ಆರೇರ, ಬಸವರಾಜ, ಪಾಂಡುರಂಗ, ಶಾಂತಪ್ಪ ಯಮನೂರ, ಎಸ್.ಎಸ್.ಹೊನ್ನೆಗೌಡ್ರ, ಎಚ್.ಕೆ.ರಾಜೂರ ವಿವಿಧ ಸಂಘಗಳ ಪದಾಧಿಕಾರಿಗಳಾದ ಶಿವಕುಮಾರ, ವೆಂಕಟೇಶ, ಬಸವರಡ್ಡಿ ಸೇರಿದಂತೆ ಅನೇಕರು ಹಾಜರಿದ್ದರು.