ಹುಮನಾಬಾದ್: ಅಂಗವಿಕಲರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದೇ ಕ್ರೀಡಾಸ್ಪರ್ಧೆ ಮೂಲ ಉದ್ದೇಶ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಮಾಣಿಕಪ್ಪ ಬಕ್ಕನ್ ಹೇಳಿದರು.
ಇಲ್ಲಿನ ಬಿ,ಆರ್.ಸಿ ಕಚೇರಿ ಪ್ರಾಂಗಣದಲ್ಲಿ ವಿಶ್ವಅಂಗವಿಕಲ ದಿನಾಚರಣೆ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ವಿವಿಧ ಕ್ರೀಡಾಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಅಂಗವಿಕಲರು ಅಸಹಾಯಕರಲ್ಲ. ಅವರು ಮನಸ್ಸು ಮಾಡಿದರೆ ಸದೃಢರಿಗಿಂತಲೂ ವಿಶಿಷ್ಟ ಸಾಧನೆ ಗೈಯ್ಯಬಲ್ಲರು. ಅವರಿಗೆ ಬೇಕಾಗಿರುವುದು ಅನುಕಂಪ ಅಲ್ಲ, ಅವಕಾಶ.
ಆ ಸಂಬಂಧ ಸರ್ಕಾರ ಪ್ರತಿ ವರ್ಷ ವಿಶ್ವಅಂಗವಿಕಲ ದಿನಾಚರಣೆ ಅಂಗವಾಗಿ ವಿವಿಧ ಬಗೆಯ ಅಂಗವಿಕಲ ಮಕ್ಕಳಿಗೆ ಅವರ ಸಾಮರ್ಥ್ಯ ಅನುಸಾರ ಸ್ಪರ್ಧೆ ಆಯೋಜಿಸಲಾಗುತ್ತಿದೆ.
ಇಂದಿನ ಸ್ಪರ್ಧೆಯಲ್ಲಿ ತಾಲ್ಲೂಕಿನ 180ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಕಪ್ಪೆ ಓಟ, ಸಂಗೀತ ಕುರ್ಚಿ, 100ಮೀ ಓಟ, ಗಾಯನ, ನಿಬಂಧ, ಮಡಿಕೆ ಒಡೆಯುವುದು ಮೊದಲಾದ ದೇಸಿ ಆಟಗಳ ಸ್ಪರ್ಧೆ ನಡೆಸಲಾಗುತ್ತಿದೆ. ಪಾಲಕರಿಗಾಗಿ ಚಿತ್ರ ಗೀತೆಗಳ ಸ್ಪರ್ಧೆ ಏರ್ಪಡಿಸಿ, ವಿಜೇತ ಮಕ್ಕಳು ಹಾಗೂ ಪಾಲಕರಿಗೆ ಪ್ರಮಾಣಪತ್ರ ಹಾಗೂ ಪಾರಿತೋಷಕ ವಿತರಿಸಲಾಗುತ್ತಿದೆ ಎಂದರು.
ಸಂಪನ್ಮೂಲ ಅಧಿಕಾರಿಗಳಾದ ಪರಮೇಶ್ವರ, ಫಕೀರ ಅಹ್ಮದ್, ಅಶೋಕಕುಮಾರ, ಪ್ರಕಾಶ ರಂಜೋಳಕರ್, ಜಾಕೀರ್ ಹುಸೇನ್, ಅರ್ಜುನ್, ಬಾಬುರಾವ ಮತ್ತಿತರರು ಇದ್ದರು.
‘ಅಂಗವಿಕಲರಿಗೆ ಪ್ರೊತ್ಸಾಹ’
ಹುಮನಾಬಾದ್: ಅಂಗವಿಕಲ ವಿದ್ಯಾರ್ಥಿಗಳು ಧೈರ್ಯಗೆಡದೆ ಎಲ್ಲವನ್ನು ಆತ್ಮಸ್ಥೈರ್ಯ ದಿಂದ ಎದುರಿಸುವ ಪರಿಪಾಠ ಮೈಗೂಡಿಸಿಕೊಳ್ಳುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಮೌನೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶರಣಪ್ಪಗೌಡ ಪಾಟೀಲ ತಿಳಿಸಿದರು.
ವಿಶ್ವಅಂಗವಿಕಲ ದಿನಾಚರಣೆ ಅಂಗವಾಗಿ ಮಂಗಳವಾರ ಸ್ಥಳೀಯ ಜೇರಪೇಟೆ ಕೊಳಚೆ ಪ್ರದೇಶದಲ್ಲಿನ ತಮ್ಮ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಅಂಗವಿಕಲ ವಿದ್ಯಾರ್ಥಿಗಳಿಗೆ ಅಗತ್ಯ ಸಹಕಾರ ನೀಡಲು ಸಂಸ್ಥೆ ಸಿದ್ಧವಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು. ಬಿ.ಆರ್.ಸಿ ಮಾಣಿಕಪ್ಪ ಬಕ್ಕನ್, ಬಿ.ಆರ್ಪಿ ಪರಮೇಶ್ವರ ಕಲ್ಲೂರ, ಸಿಬ್ಬಂದಿ ಜ್ಯೋತಿ ಪಾಟೀಲ, ಶಿವಮಂಗಲಾ ಸಜ್ಜನಶೆಟ್ಟಿ, ಅರವಿಂದ ಪಾಟೀಲ, ಪ್ರತಿಭಾರೆಡ್ಡಿ, ಮಾರುತಿರಾವ , ಅಶೋಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.