ಹನುಮಸಾಗರ: ಅಂಗವಿಕಲ ಮಕ್ಕಳಿಗೆ ಅನುಕಂಪದ ಬದಲು ಅವಕಾಶ ನೀಡಿದರೆ ಇತರ ಮಕ್ಕಳಂತೆ ಅವರೂ ಸಮಾಜದ ಮುಖ್ಯವಾಹಿನಿಗೆ ಬರಬಲ್ಲರು ಎಂದು ಪೊಲೀಸ್ಪಾಟೀಲ ಫೌಂಡೇಶನ್ ಅಧ್ಯಕ್ಷ ಮಾದೇಗೌಡ ಪೊಲೀಸ್ಪಾಟೀಲ ಹೇಳಿದರು.
ಸಮೀಪದ ಮೂಗನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಪೊಲೀಸ್ಪಾಟೀಲ ಫೌಂಡೇಶನ್ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವ ಅಂಗವಿಕಲ ಮಕ್ಕಳ ದಿನಾಚರಣೆಯಲ್ಲಿ ಅಂಗವಿಕಲ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಕ್ರೀಡೆ, ವಿಜ್ಞಾನ ಹಾಗೂ ಸಂಗೀತ ಕ್ಷೇತ್ರಗಳು ಸೇರಿದಂತೆ ವಿವಿಧ ರಂಗಗಳಲ್ಲಿ ಅನೇಕ ಪ್ರತಿಭಾವಂತ ಅಂಗವಿಕಲರು ತಮ್ಮ ಅಂಗವಿಕಲತೆ ಮೆಟ್ಟಿನಿಂತು ಸಾಧನೆ ಮಾಡಿದ್ದು ಇತರರಿಗೆ ಸ್ಫೂರ್ತಿಯಾಗಿದೆ. ಆದರೆ ಆ ಎಲ್ಲ ಸ್ಫೂರ್ತಿಗೆ ಸಮಾಜದ ಪ್ರೋತ್ಸಾಹ ಅಗತ್ಯವಾಗಿರುತ್ತದೆ ಎಂಬುದನ್ನು ಮರೆಯುವಂತಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಕೆ.ಎಸ್.ಅಥಣಿ ಮಾತನಾಡಿದರು.
ಅರ್ಹ ಅಂಗವಿಕಲ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು. ಸಾಧನೆ ಮಾಡಿದ ಅಂಗವಿಕಲ ಯುವಕರಾದ ಹುಚ್ಚೀರಪ್ಪ. ಕಳಕಪ್ಪ ಕಮತರ ಇವರನ್ನು ಸನ್ಮಾನಿಸಲಾಯಿತು.
ಇದಕ್ಕೂ ಮೊದಲು ವಿವಿಧ ಘೋಷಣೆಗಳನ್ನು ಕೂಗುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.
ಜೂಲಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲತೀಫಸಾಬ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವನಗೌಡ ಪಾಟೀಲ ಜಾಥಾಕ್ಕೆ ಚಾಲನೆ ನೀಡಿದರು.
ಅಪ್ಪಣಗೌಡ ಬೋದೂರ, ಬಾಲಪ್ಪ. ಕಮತರ, ಕಳಕಪ್ಪ ಪುರದ, ಕಳಕಪ್ಪ ಕಮತರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಸಯ್ಯ ಭಿಕ್ಷಾವತಿಮಠ, ಶರೀಫಸಾಬ. ಜಿಗಳೂರ, ಜಗದೀಶ ಕಿರೇಸೂರ, ಕಳಕಪ್ಪ ಸೊಬರದ, ಮಹೇಶ. ಬಿ.ಸಿ, ಜ್ಞಾನೇಶ ಅಂಬೋರೆ ಇತರರು ಇದ್ದರು.