ಯಾದಗಿರಿ: ‘ಅಂಗವಿಕಲರ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಲಾಭ ಸಕಾಲಕ್ಕೆ ಅರ್ಹ ಫಲಾನುಭವಿಗಳಿಗೆ ದೊರಕಿಸುವ ಕಾರ್ಯವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು’ ಎಂದು ಸಿವಿಲ್ ನ್ಯಾಯಾಧೀಶ ಟಿ.ಶ್ರೀನಿವಾಸ ಹೇಳಿದರು.
ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯನ್ನು ಉದ್ಫಾಟಿಸಿ ಅವರು ಮಾತನಾಡಿದರು. ‘ಅಂಗವಿಕಲರಿಗೆ ಸರ್ಕಾರದ ವಿವಿಧ ಯೋಜನೆಗಳ ಅಡಿ ದೊರೆಯಬಹುದಾದ ಸೌಲಭ್ಯಗಳು ಸಕಾಲಕ್ಕೆ ದೊರೆಯುವ ಅವಶ್ಯಕತೆ ಇದೆ. ಅವರಿಗೆ ನ್ಯಾಯಯುತ ಸಹಕಾರ ನೀಡಿ ಸಂಬಂಧಿಸಿದ ಸೌಲಭ್ಯಗಳನ್ನು ದೊರಕಿಸುವ ಪ್ರಯತ್ನವನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾಡಬೇಕು’ ಎಂದು ಸಲಹೆ ನೀಡಿದರು.
ಸಮಾಜದಲ್ಲಿ ಅಂಗವಿಕಲರಿಗೆ ಸಮಾನ ಅವಕಾಶ ದೊರೆಯುವ ಅಗತ್ಯತೆ ಇದೆ. ಅವರಿಗೆ ಅನುಕಂಪದ ಬದಲಾಗಿ ಅವಕಾಶ ನೀಡುವ ಕಾರ್ಯ ಹೆಚ್ಚಾಗಿ ನಡೆಯಬೇಕಾಗಿದೆ. ಅಂಗವಿಕಲರಿಗೆ ಸಕಾಲದಲ್ಲಿ ಸರ್ಕಾರಿ ಸೌಲಭ್ಯಗಳು ದೊರೆಯದಿದ್ದಲ್ಲಿ ಕಾನೂನಿನ ಅಡಿ ಅವರಿಗೆ ದೊರೆಕಿಸಬೇಕಾದ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು’ ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಬಿ.ಆರ್.ಪವಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಪಂಚಾಯಿತಿಯಿಂದ ಗ್ರಾಮ ಪಂಚಾಯಿತಿಗಳವರೆಗಿನ ವ್ಯಾಪ್ತಿಯಲ್ಲಿ ಅಂಗವಿಕಲರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸಲು ಶೇ 3ರಷ್ಟು ಅನುದಾನ ಲಭ್ಯವಿದೆ. ಅದರಂತೆ ವಿವಿಧ ಅಭಿವೃದ್ಧಿ ಇಲಾಖೆಗಳ ವ್ಯಾಪ್ತಿಯಲ್ಲಿ ಇಂತಹ ಅನುದಾನ ಲಭ್ಯವಿರುವುದರಿಂದ ಅಂಗವಿಕಲ ಫಲಾನುಭವಿಗಳಿಗೆ ಸಿಗಬಹುದಾದ ಸೌಲಭ್ಯ ಸಕಾಲಕ್ಕೆ ದೊರೆಯುವ ಅವಶ್ಯಕತೆ ಇದೆ.
ಪ್ರತಿ ಲೋಕಸಭಾ ಮತ್ತು ವಿಧಾನಸಭಾ ಮತ್ತು ವಿಧಾನ ಪರಿಷತ್ ಸದಸ್ಯರ ಅನುದಾನದಡಿ ತಲಾ ₨10 ಲಕ್ಷ ಅನುದಾನವು ಅಂಗವಿಕಲರಿಗೆ ದ್ವಿಚಕ್ರ ವಾಹನ, ವಿವಿಧ ಸಾಧನ ಸಲಕರಣೆಗಳಿಗಾಗಿ ಲಭ್ಯವಿದ್ದು, ಅದರ ಸಮರ್ಪಕ ಉಪಯೋಗದ ಅವಶ್ಯಕತೆ ಇದೆ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ, ಯಾದಗಿರಿ ಸಿಡಿಪಿಒ ನಿಷ್ಠಿ ವೇದಿಕೆಯಲ್ಲಿದ್ದರು.
ಅಂಗವಿಕಲರ ಕ್ಷೇತ್ರದಲ್ಲಿ ಸಾಧನೆಗೈದ ವಿಶೇಷ ಶಿಕ್ಷಕ ಶರಣಪ್ಪ ಮತ್ತು ಆರ್. ವಿಶ್ವನಾಥ ರಡ್ಡಿ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ಅಂಗವಿಕಲರ ಹೋರಾಟದ ಸಮಿತಿ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಸಂಗನಗೌಡ ಧನರಡ್ಡಿ ಮಾತನಾಡಿದರು. ಸಾಹೇಬಗೌಡ ಬಿರಾದಾರ ಸ್ವಾಗತಿಸಿ, ನಿರೂಪಿಸಿದರು. ಚನ್ನಬಸಪ್ಪ ಗೋಡಿಕಾರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.