ಉಪ್ಪಿನಂಗಡಿ: ಒಂದು ಊರಿನ ಅಭಿವೃದ್ಧಿ ಎಂದಾಗ ಅಲ್ಲಿನ ರಸ್ತೆ, ಕಟ್ಟಡಗಳು ಎಂದೇ ಭಾವಿಸಲಾಗುತ್ತದೆ, ಆದರೆ ಊರಿನಲ್ಲಿ ಒಂದು ವಿದ್ಯಾ ಸಂಸ್ಥೆ ತಲೆ ಎತ್ತಿದರೆ ಅದು ಕೂಡಾ ಅಭಿವೃದ್ಧಿಯ ಮೇಲ್ಪಂಕ್ತಿಯಾಗಿರುತ್ತದೆ. ಅದರ ಕೊಡುಗೆ ಅಪಾರವಾಗಿರುತ್ತದೆ ಎಂದು ಬೆಂಗಳೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಇಬ್ರಾಹಿಂ ಗೂನಡ್ಕ ಹೇಳಿದರು.
ಭಾನುವಾರ ಉಪ್ಪಿನಂಗಡಿ ಅರಫಾ ವಿದ್ಯಾ ಕೇಂದ್ರದ ದಶಮಾನೋತ್ಸವ ಮತ್ತು ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಮಾತನಾಡಿ ಮಕ್ಕಳಲ್ಲಿ ಕನಸು ತುಂಬಬೇಕು, ಆ ಮೂಲಕ ಅವರ ಪ್ರತಿಭೆ ವಿಸಕನಕ್ಕೆ ನೆರವಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ. ಶಾಹುಲ್ ಹಮೀದ್, ಕಾವು ಬುಶ್ರಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಅಜೀಜ್ ಬುಶ್ರಾ, ಸಂಸ್ಥೆಯ ನಿರ್ದೇಶಕ ನಝೀರ್ ಮಠ, ದಶಮಾನೋತ್ಸವ ಸಮಿತಿಯ ಅಬ್ದುಲ್ ಸಮದ್, ವಕೀಲ ನೂರುದ್ದೀನ್ ಸಾಲ್ಮರ, ಸಂಸ್ಥೆಯ ಅಧ್ಯಕ್ಷ ಕೆ.ಪಿ.ಎ. ಸಿದ್ದಿಕ್ ಹಾಜಿ, ಪ್ರಾಚಾರ್ಯ ಅಬ್ದುಲ್ ರಜಾಕ್ ಮಾತನಾಡಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಶಫೀಕ್ ಅರಫ ಇದ್ದರು.
ಪ್ರತಿಭಾ ಪುರಸ್ಕಾರ: ವಾರ್ಷಿಕೋತ್ಸವ ಮತ್ತು ದಶಮಾನೋತ್ಸವ ಸಲುವಾಗಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕಿನ ವಿವಿಧ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಶಿಕ್ಷಕಿ ಜಯಲಕ್ಷ್ಮೀ ಸ್ವಾಗತಿಸಿ, ಶಿಕ್ಷಕಿ ನವೀನ್ ವಂದಿಸಿದರು. ಶರಲ್ ಲೋಬೋ ನಿರೂಪಿಸಿದರು.