ಮೂಡುಬಿದಿರೆ: ರೈತರು ಯಾವುದೇ ವಸ್ತುವನ್ನು ಎಸೆಯಬಾರದು. ಅದು ವ್ಯರ್ಥ ಎನ್ನಬಾರದು. ಅನ್ನವನ್ನು ಪೋಲು ಮಾಡಬಾರದು. ನಾವೆಲ್ಲ ಸ್ನಾನದ ನೀರನ್ನೂ ವ್ಯರ್ಥ ಮಾಡುತ್ತಿರಲಿಲ್ಲ. ಎರಡು ಪಾತ್ರೆ-ಗಳಲ್ಲಿ ನೀರನ್ನು ತೆಗೆದುಕೊಂಡು ಹೋಗಿ ಮರದ ಬುಡದಲ್ಲಿ ಸ್ನಾನ ಮಾಡುತ್ತಿದ್ದೆವು. ಇಂದು ಆ ಮರಗಳ ಬಳಿಗೆ ತೆರಳಿದಾಗ ಸಂತೋಷವಾಗುತ್ತಿದೆ....
ಹೀಗೆ ಕೃಷಿ ಬದುಕಿನ, ಸಾಧನೆಯ ಪುಟಗಳ ಹಾಳೆಗಳನ್ನು ತಿರುವಿ ಹಾಕಿದವರು ದೊಡ್ಡಬಳ್ಳಾಪುರದ ಪ್ರಗತಿಪರ ಕೃಷಿಕ ಡಾ.ಎಲ್.ನಾರಾಯಣ ರೆಡ್ಡಿ.
ಕೃಷಿ ಮೇಳದಲ್ಲಿ ಆಶಯ ಭಾಷಣ ಮಾಡಿದ ಅವರು ‘ಯುವ ಪೀಳಿಗೆಯಿಂದ ಸ್ವಾಭಿಮಾನಿ ಕೃಷಿ, ಅರ್ಥಪೂರ್ಣ ಬದುಕು ಸಾಗಿಸಲು ಸಹಕಾರಿ’ ಕುರಿತು ಮಾತನಾಡಿ ಕೃಷಿ ಬದುಕಿನ ಚಿತ್ರಣವನ್ನು ಅನಾವರಣಗೊಳಿಸಿದರು. ಕೃಷಿ ಬಿಟ್ಟು ಅನೇಕ ಮಂದಿ ಹೊರ ಹೋಗುತ್ತಿದ್ದಾರೆ. ಕೃಷಿಯನ್ನು ವ್ರತವನ್ನಾಗಿ, ಒಂದು ತಪಸ್ಸನ್ನಾಗಿ ತೆಗೆದುಕೊಳ್ಳಬೇಕು. ರೈತರಾದವರು ನೋವು ಪಡುವುದಿಲ್ಲ. ಅವರ ಅಭ್ಯಾಸಗಳು ಸರಿ ಇಲ್ಲದೆ ಇದ್ದಾಗ ನೋವು ನೀಡುತ್ತದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಇದ್ದರು.