ಬಾಗಲಕೋಟೆ:‘ಜಿಲ್ಲೆಯ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ಸಂಘಟನೆಗಾಗಿ ಮತ್ತು ಸೌಲಭ್ಯ ಒದಗಿಸಲು ಅಹಿಂದ ಒಕ್ಕೂಟ ರಚನೆಯಾಗಿದೆಯೇ ಹೊರತು ಚುನಾವಣೆ ಉದ್ದೇಶದಿಂದ ಅಲ್ಲ’ ಎಂದು ಮಾಜಿ ಸಚಿವ, ಅಹಿಂದ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಬಿ. ತಿಮ್ಮಾಪುರ ತಿಳಿಸಿದರು.
ನಗರದ ಭಗಿನಿ ಸಮಾಜದ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಹಿಂದ ಒಕ್ಕೂಟದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಅಹಿಂದ ಒಕ್ಕೂಟ ರಚನೆಯನ್ನು ತಪ್ಪಾಗಿ ಅರ್ಥೈಸುವ ಯತ್ನ ನಡೆಯುತ್ತಿರುವುದು ಸರಿಯಲ್ಲ’ ಎಂದರು.
‘ಅಹಿಂದ ಒಕ್ಕೂಟವು ಪಕ್ಷಾತೀತವಾಗಿ ರಚನೆಯಾಗಿದೆ. ಯಾವುದೇ ಪಕ್ಷ, ಜಾತಿ, ವ್ಯಕ್ತಿ ಅಥವಾ ಶಕ್ತಿಯ ವಿರುದ್ಧ ರಚನೆಯಾಗಿಲ್ಲ’ ಎಂದು ಹೇಳಿದರು.
‘ಮುಂಬರುವ ದಿನಗಳಲ್ಲಿ ಒಕ್ಕೂಟವನ್ನು ಬಲಪಡಿಸುವ ಉದ್ದೇಶದಿಂದ ಇದೇ 26ರಿಂದ ಪ್ರತಿ ತಾಲ್ಲೂಕಿನಲ್ಲಿ ಸಭೆ ಕರೆದು ತಾಲ್ಲೂಕು ಸಮಿತಿಯನ್ನು ರಚಿಸಲಾಗುವುದು’ ಎಂದು ತಿಳಿಸಿದರು. ‘ಮುಖ್ಯಮಂತ್ರಿ ಆದ ಬಳಿಕ ಅಹಿಂದಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಸಿದ್ದರಾಮಯ್ಯ ಅವರನ್ನು ಶೀಘ್ರದಲ್ಲೇ ಜಿಲ್ಲೆಗೆ ಆಹ್ವಾನಿಸಿ ಸನ್ಮಾನಿಸಲಾಗುವುದು’ ಎಂದರು.
‘ಅಹಿಂದ ಸಂಘಟನೆಗೆ ಯಾರೇ ಬೆಂಬಲಿಸಿದರೂ ಸ್ವಾಗತ. ಜಿಲ್ಲೆಯ ವಿವಿಧ ಮಠಗಳ ಸ್ವಾಮೀಜಿಗಳನ್ನು ಭೇಟಿ ಮಾಡಿ ಅಹಿಂದ ಬಲಪಡಿಸಲು ಬೆಂಬಲ ಯಾಚಿಸುವೆವು’ ಎಂದರು. ಅಹಿಂದ ಒಕ್ಕೂಟದ ಪ್ರಮುಖರಾದ ಅಶೋಕ ಲಿಂಬಾವಳಿ, ಡಾ.ದೇವರಾಜ ಪಾಟೀಲ, ಮುತ್ತಣ್ಣ ಬೆಣ್ಣೂರ, ಅಶೋಕ ಲಾಗಲೂಟಿ, ಎಂ.ಎಲ್. ಶಾಂತಗೇರಿ, ಶಂಭುಗೌಡ ಪಾಟೀಲ, ಡಾ.ಬಾಬು ರಾಜೇಂದ್ರ ನಾಯಕ, ಡಾ. ಶೇಖರ ಮಾನೆ, ಗಂಗುಬಾಯಿ ಮೇಟಿ, ರವೀಂದ್ರ ಕಲಬುರ್ಗಿ, ಎಸ್.ಎಂ. ಇದ್ದಲಗಿ, ಮೈನುದ್ದೀನ್ ನಬೀವಾಲೆ, ನೂರ್ ಅಹ್ಮದ್ ಪಟ್ಟೇವಾಲೆ, ರಜಾಕ್ ಹಳ್ಳೂರ, ಮಹಾದೇವ ಹೊಸೆಟ್ಟಿ, ಕೃಷ್ಣ ಲಮಾಣಿ, ಎಸ್.ಎಸ್. ದೊಡ್ಡಮನಿ ಮತ್ತಿತರರು ಇದ್ದರು.