ಮಂಗಳೂರು: ದಕ್ಷಿಣ ಕನ್ನಡದಲ್ಲಿ ಎಲ್ಲ ನಾಗರಿಕರಿಗೆ ಇನ್ನೂ ಆಧಾರ್ ಕಾರ್ಡ್ ಸಿಗದೇ ಇರುವುದರಿಂದ ಪಡಿತರ ವಿತರಣೆಗೆ ಆಧಾರ್ನ್ನು ಮುಂದಿನ ತಿಂಗಳು ಕಡ್ಡಾಯ ಮಾಡಬಾರದು ಎಂದು ಗ್ಯಾಸ್ ಮತ್ತು ಪಡಿತರ ಬಳಕೆದಾರರ ವೇದಿಕೆಯ ಅಧ್ಯಕ್ಷ ಧರ್ಮೇಂದ್ರ ಕೆ. ಹೇಳಿದರು.
ಅವರು ಭಾನುವಾರ ನಗರದ ಹಿದಾಯತ್ ಸೆಂಟರ್ನಲ್ಲಿ ನಡೆದ ಗ್ಯಾಸ್ ಮತ್ತು ಪಡಿತರ ಬಳಕೆದಾರರ ವೇದಿಕೆಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಅಕ್ಟೋಬರ್ನಿಂದ ಪಡಿತರ ಸಾಮಗ್ರಿ ಪಡೆಯಲು ಆಧಾರ್ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂಬ ಮಾಹಿತಿ ಇದೆ. ಆದರೆ ಆಧಾರ್ ಕೇಂದ್ರಗಳೇ ಕಡಿಮೆ ಇರುವುದರಿಂದ ಈಗಲೇ ಆಧಾರ್ ಕಡ್ಡಾಯಗೊಳಿಸಬಾರದು ಎಂದು ಅವರು ಹೇಳಿದರು.
ಬಜೆ್ಪಯಲ್ಲಿ ಅಡುಗೆ ಅನಿಲವನ್ನು ಮನೆಬಾಗಿಲಿಗೆ ವಿತರಿಸದೇ ರಸ್ತೆಯಲ್ಲೇ ನಿಂತು ಸಿಲಿಂಡರ್ಗಳನ್ನು ಕೊಂಡೊಯ್ಯುವಂತೆ ಸೂಚಿಸಲಾಗುತ್ತದೆ ಎಂದು ಅಲ್ಲಿನ ನಿವಾಸಿಗಳು ದೂರು ಹೇಳಿಕೊಂಡರು. ಅದೇ ರೀತಿ ಅಡುಗೆ ಅನಿಲ ಬುಕ್ ಮಾಡಿದ ನಂತರ ಎರಡು ವಾರಗಳ ಕಾಲ ಕಾಯಬೇಕಾಗುತ್ತದೆ. 48 ಗಂಟೆಯೊಳಗೆ ಸಿಲಿಂಡರ್ ನೀಡಬೇಕೆಂಬ ನಿಯಮವನ್ನು ಏಜೆನ್ಸಿಗಳು ಪಾಲಿಸುತ್ತಿಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಿಗೆ ದೂರು ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ ಎಂದು ವೇದಿಕೆಯ ಸದಸ್ಯರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ವೇದಿಕೆ ಅಧ್ಯಕ್ಷರು, ಮುಂದಿನ ದಿನಗಳಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಗುವುದು. ಹಾಗೂ ಸಮಸ್ಯೆಗಳನ್ನು ಬಿಂಬಿಸುವ ಸಾಕ್ಷ್ಯ ಚಿತ್ರ ನಿರ್ಮಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೊಸ ಕಾರ್ಯಕಾರಿ ಸಮಿತಿ ರಚನೆಗಾಗಿ 25 ಮಂದಿಯನ್ನು ಆಯ್ಕೆ ಮಾಡಲಾಯಿತು. ಈ ಪದಾಧಿಕಾರಿಗಳು ಸಭೆ ಸೇರಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಿದ್ದಾರೆ ಎಂದು ಕಾರ್ಯದರ್ಶಿ ಸಿದ್ದಿಕ್ ಜಕ್ರಿಬೆಟ್ಟು ಹೇಳಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ವಿಶ್ವನಾಥ್ ಕೆ.ಬಿ., ರೇಖಾ ಬಾಳಿಗಾ ಉಪಸ್ಥಿತರಿದ್ದರು. ಅಜಯ್ಕುಮಾರ್ ಲೆಕ್ಕ ಪತ್ರ ಮಂಡಿಸಿದರು. ಆಯೇಷಾ ಸ್ವಾಗತಿಸಿದರು. ಮಹಮ್ಮದ್ ಮಸ್ಲಿನ್, ಅಬ್ದುಲ್ ಸಲಾಂ ಮತ್ತಿತರರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.