ದಾವಣಗೆರೆ: ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ, ಸ್ಪರ್ಧಿಗಳು ಉದ್ದೀಪನ ಮದ್ದು ಸೇವಿಸಿದರೆ ಅಮಾನತು ಮಾಡಲಾಗುವುದು ಎಂದು ರಾಷ್ಟ್ರೀಯ ಪವರ್ಲಿಫ್ಟಿಂಗ್ ಫೆಡರೇಷನ್ನ ತಾಂತ್ರಿಕ ಸಮಿತಿ ಅಧ್ಯಕ್ಷ ರತನ್ ಬಷಾಕ್ ಎಚ್ಚರಿಕೆ ನೀಡಿದರು.
ನಗರದ ರೇಣುಕಾ ಮಂದರಿದಲ್ಲಿ ಕರ್ನಾಟಕ ಪವರ್ಲಿಫ್ಟಿಂಗ್ ಅಸೋಸಿಯೇಷನ್, ಬೀರೇಶ್ವರ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ಶುಕ್ರವಾರದಿಂದ ಆರಂಭಗೊಂಡ 3ನೇ ರಾಷ್ಟ್ರೀಯ ಪುರುಷರ ಮತ್ತು ಮಹಿಳೆಯರ ಹಾಗೂ ಮಾಸ್ಟರ್್ಸ ಪವರ್ಲಿಫ್ಟಿಂಗ್ ಚಾಂಪಿಯನ್ಷಿಪ್– 2013ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ಸಂಬಂಧ ರಾಷ್ಟ್ರೀಯ ಫೆಡರೇಷನ್ ಕಠಿಣ ನಿರ್ಧಾರ ಕೈಗೊಂಡಿದೆ. ಇಲ್ಲಿ ಆರಂಭಗೊಂಡಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಯಾವುದೇ ಸ್ಪರ್ಧಿಗಳೂ ಉದ್ದೀಪನ ಮದ್ದು ಸೇವಿಸಿ ಪಾಲ್ಗೊಂಡರೆ ಅಮಾನತು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ನಿಯಮಗಳಿಗೆ ಅನುಸಾರವಾಗಿ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಪವರ್ಲಿಫ್ಟಿಂಗ್ ಫೆಡರೇಷನ್ ಕಾರ್ಯದರ್ಶಿ ಲಿಯೊಪೀಟರ್ ಮಾತನಾಡಿ, ಚಾಂಪಿಯನ್ಷಿಪ್ಗೆ 20 ರಾಜ್ಯಗಳಿಂದ ಸ್ಪರ್ಧಿಗಳು ಆಗಮಿಸಿದ್ದಾರೆ. ಶಾಂತಿಯುತವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿ, ರಾಜ್ಯ ಪವರ್ಲಿಫ್ಟಿಂಗ್ ಸಂಸ್ಥೆಯ ಅಧ್ಯಕ್ಷ ಎಚ್.ಗುರುಸ್ವಾಮಿ ಅವರ ಸೇವೆಯನ್ನು ಶ್ಲಾಘಿಸಿದರು.
ಮಾಜಿ ಶಾಸಕ ಕೆ.ಮಲ್ಲಪ್ಪ ಮಾತನಾಡಿ, ಸ್ಪರ್ಧೆಗಳ ಯಶಸ್ಸಿಗೆ ಕ್ರೀಡಾಪಟುಗಳು ಸಹಕರಿಸಬೇಕು. ಬೇರೆಬೇರೆ ರಾಜ್ಯಗಳಿಂದ
ಆಗಮಿಸಿರುವ ಕ್ರೀಡಾಪಟುಗಳು ಸಂಘಟನೆ ಜತೆಗೆ ಸಹಕರಿಸಬೇಕು ಎಂದು ಕೋರಿದರು. ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಮಾತನಾಡಿ, ದಾವಣಗೆರೆಯಲ್ಲಿ ರಾಷ್ಟ್ರಮಟ್ಟದ ಕ್ರೀಡೆಗಳು ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಇಲ್ಲಿನ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದು ಹೇಳಿದರು.
ರಾಷ್ಟ್ರೀಯ ಪವರ್ಲಿಫ್ಟಿಂಗ್ ಫೆಡರೇಷನ್ನ ಅಧ್ಯಕ್ಷ ನಿರ್ಮಲ್ ಷಾ ಕ್ರೀಡಾಪಡುಗಳಿಗೆ ಶುಭಾಶಯ ಕೋರಿದರು. ರಾಜ್ಯ ಪವರ್ಲಿಫ್ಟಿಂಗ್ ಫೆಡರೇಷನ್ ಸಂಸ್ಥೆ ಅಧ್ಯಕ್ಷ ಗುರುಸ್ವಾಮಿ, ಎಚ್.ಕೃಷ್ಣಪ್ಪ, ಕೆ.ಎಸ್.ಸಾಯಿನಾಥ್, ಸಿರಿಸಾಲಿಮಠ, ನರಸಿಂಹ, ಟಿ.ಡಿ.ಹಾಲೇಶ್ ಮೊದಲಾದವರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.