ರಾಯಚೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭದಲ್ಲಿ 8 ಮಂದಿ ಪೊಲೀಸರಿಗೆ ಗಾಯಗಳಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾಗರಾಜ ತಿಳಿಸಿದ್ದಾರೆ.
ಮುತ್ತಿಗೆ ಹಾಕಲು ಯತ್ನಿಸಿದಾಗ ಲಾಠಿ ಪ್ರಹಾರ ಮಾಡಿ ಚದುರಿಸಲಾಗಿದೆ. ಈ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಯಿತು. ಕಲ್ಲು ತೂರಿದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಘಟನೆ ಬಳಿಕ ಸಂಘಟನೆ ಮುಖಂಡರನ್ನು ಕರೆಸಿ, ವಿಚಾರಣೆ ಮಾಡಿ ಕಳುಹಿಸಲಾಗಿದೆ. ಯಾರನ್ನೂ ಬಂಧಿಸಿಲ್ಲ ಎಂದು ತಿಳಿಸಿದರು.
ಡಿಸಿ ಹೇಳಿಕೆ: ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವಸೂಲಿಗಾಗಿ ಕೆಲ ಸಂಘಟನೆಗಳು ಇಂಥ ಕೆಲಸ ಮಾಡುತ್ತಿವೆ. ಹೀಗಾಗಿ ಜಿಲ್ಲೆ ಅಭಿವೃದ್ಧಿ ಆಗುತ್ತಿಲ್ಲ. ಗುತ್ತಿಗೆದಾರರು ಕೆಲಸ ಮಾಡಲು ಬರುತ್ತಿಲ್ಲ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ತಿಳಿಸಿದರು.
ಸಂಘಟನೆ ಅಧ್ಯಕ್ಷ ಹೇಳಿಕೆ: ಬೇಡಿಕೆ ಈಡೇರಿಕೆಗೆ ಹಲವು ದಿನಗಳಿಂದ ಹೋರಾಟ ನಡೆಸಲಾಗುತ್ತಿತ್ತು. ನಮ್ಮ ಉದ್ದೇಶ ಸಣ್ಣ ರೈತರಿಗೆ ಪಟ್ಟಾ ಕೊಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಇದ್ದವು. ಜಿಲ್ಲಾಧಿಕಾರಿ ಇದಕ್ಕೆ ಸ್ಪಂದಿಸಿಲ್ಲ. ಮುತ್ತಿಗೆ ಹಾಕುವುದಾಗಿ ಮೊದಲೇ ಹೇಳಿದ್ದರೂ ಮನವಿ ಸ್ವೀಕರಿಸಲು ಬರಲಿಲ್ಲ. ಹೀಗಾಗಿ ಈ ಪ್ರತಿಭಟನೆ ಮಾಡಲಾಗಿದೆ ಎಂದು ಸಂಘಟನೆ ರಾಜ್ಯ ಘಟಕ ಅಧ್ಯಕ್ಷ ಆರ್. ಮಾನಸಯ್ಯ ಹೇಳಿದರು.
ಲಾಠಿ ಪ್ರಹಾರ ಸಂದರ್ಭದಲ್ಲಿ ಕಲ್ಲು ತೂರಾಟ ಘಟನೆ ನಮ್ಮ ಸಂಘಟನೆಗೆ ಸಂಬಂಧಿಸಿದ್ದಲ್ಲ. ದುಷ್ಕರ್ಮಿಗಳು ಯಾರೋ ಮೂರನೇ ವ್ಯಕ್ತಿಗಳು ಮಾಡಿರಬಹುದು. ಈ ಘಟನೆಯಲ್ಲಿ ಗಾಯಗೊಂಡ ಜನರಿಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.