ಹೆಬ್ರಿ: ಎಪಿಎಲ್ ಪಡಿತರ ಚೀಟಿದಾರರು ಅಕ್ಕಿ ದೊರೆಯದೇ ನೋವಿನಲ್ಲಿದ್ದು, ಶೀಘ್ರ ಅವರಿಗೂ ಅಕ್ಕಿ, ಸೀಮೆಎಣ್ಣೆ ಮತ್ತು ಗ್ಯಾಸ್ ಹೊಂದಿದವರಿಗೂ ಸೀಮೆಎಣ್ಣೆ ನೀಡಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಪೆರ್ಡೂರಿನಲ್ಲಿ ಪಂಚಾಯಿತಿ ವತಿಯಿಂದ ಭಾನುವಾರ ನಡೆದ ಅಹವಾಲು ಸ್ವೀಕಾರ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಸವಲತ್ತು ವಿತರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೆರ್ಡೂರಿನಲ್ಲಿ ಶೇ.70 ಮಂದಿಗೆ ಬಿಪಿಎಲ್ ಕಾರ್ಡ್ ವಿತರಿಸುವ ಗುರಿ ಹೊಂದಿದ್ದು, ಬಿಪಿಎಲ್ ಕಾರ್ಡು ದಾರರಿಗೆ ಮನೆ ನಿರ್ಮಾಣಕ್ಕೆ ರೂ1.30 ಲಕ್ಷ ಮತ್ತು ಶೌಚಾಲಯಕ್ಕೆರೂ10 ಸಾವಿರ ಸಹಾಯಧನ ನೀಡಲಾಗುತ್ತದೆ. ಪೆರ್ಡೂರಿನಲ್ಲಿ ಅರ್ಹರಿಗೆ ಒಂದೂವರೆ ಎಕರೆ ಜಾಗದಲ್ಲಿ ಮನೆ ನಿವೇಶನ ವಿತರಿಸಲು ಕೂಡಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಸೊರಕೆ, ವಿನೂತನ ಮನಸ್ವಿನಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.
15 ದಿನದಲ್ಲಿ ಅಕ್ರಮ–ಸಕ್ರಮ ಮತ್ತು ಭೂನ್ಯಾಮಂಡಳಿ ಸಮಿತಿ ರಚಿಸಿ ಭೂಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುತ್ತದೆ, 94 ಸಿ ಮೂಲಕ ಹಕ್ಕುಪತ್ರ ನೀಡಲಾಗುತ್ತದೆ. 9–11ರ ಸಮಸ್ಯೆ ಯನ್ನು ನಿವಾರಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
500ಹೆಚ್ಚು ಜನತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಎಲ್ಲರಿಗೂ ಸ್ಥಳದಲ್ಲೇ ಸವಲತ್ತು ವಿತರಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಅಡಿಕೆ ಕೊಳೆ ರೋಗದ ಪರಿಹಾರದ ಚೆಕ್ಕನ್ನು ಸಮರ್ಪಕವಾಗಿ ವಿತರಿಸಲು ಸೂಚಿಸಿದರು.
ಪೆರ್ಡೂರು-– ಸಮಗ್ರ ಅಭಿವೃದ್ದಿಗೆ 5 ಕೋಟಿ: ಪೆರ್ಡೂರಿನ ಸಮಗ್ರ ಅಭಿವೃದ್ಧಿಗೆ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಅನುದಾನ ತರಿಸಿಕೊಂಡು ಕೆಲಸ ನಿರ್ವಹಿ ಸಲಾಗುತ್ತಿದೆ. ಒಳಚರಂಡಿ ಯೋಜನೆ ಮತ್ತು ಶಾಶ್ವತ ಕುಡಿಯುವ ನೀರಿನ ಯೋಜನೆಗೆ ₨5ಕೋಟಿ ಅನುದಾನ ನೀಡಲಾಗುತ್ತದೆ ಎಂದರು.
ಹೆಬ್ರಿ ಉಡುಪಿ ರಸ್ತೆ ರಾಷ್ಟ್ರೀಯ ಹೆದ್ದಾರಿ: ಮುಂದಿನ ದಿನಗಳಲ್ಲಿ ಹೆಬ್ರಿ ಉಡುಪಿ ಮುಖ್ಯ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಲಾಗುತ್ತದೆ ಜೊತೆಗೆ ಆಗುಂಬೆ ಘಾಟಿಯ ವಿಸ್ತರಣೆಗೆ ಶೀಘ್ರ ಚಾಲನೆ ನೀಡಲಾಗುತ್ತದೆ ಎಂದರು.
ಸರ್ಕಾರದ ಮತ್ತು ಪೆರ್ಡೂರು ಗ್ರಾ.ಪಂ. ವತಿಯಿಂದ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಪೆರ್ಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬುಕ್ಕಿಗುಡ್ಡೆ ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೆ.ಜಯಪ್ರಕಾಶ ಹೆಗ್ಡೆ, ಜಿಲ್ಲಾ ಪಂಚಾಯಿತಿ ಸದಸ್ಯೆ ಗೋಪಿ ಕೆ ನಾಯ್ಕ್, ತಾಲ್ಲೂಕು ಪಂಚಾಯಿತಿ ಸದಸ್ಯೆ ನಾಗವೇಣಿ ಪುತ್ರನ್, ಪಂಚಾಯಿತಿ ಉಪಾಧ್ಯಕ್ಷೆ ಬೇಬಿ ಯಾನೆ ಅಮ್ಮಣ್ಣಿ, ಪೆರ್ಡೂರಿನ ಮುಖಂಡ ಕೆ.ಶಾಂತಾರಾಮ ಸೂಡ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಜಿ ಪ್ರಭು, ಉಡುಪಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಮಂಜುನಾಥಯ್ಯ, ತಹಶೀಲ್ದಾರ್ ಗುರುಪ್ರಸಾದ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಉಪೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ಹೇರ್ಡೇಬೀಡು ವಸಂತ ಕುಮಾರ್ ಶೆಟ್ಟಿ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.