ನವದೆಹಲಿ (ಪಿಟಿಐ): ಈ ತೀರ್ಪಿನ ನಂತರ ಎರಡು ತಿಂಗಳಲ್ಲಿ ಯಾವುದೇ ಅತ್ಯಾಚಾರ ಪ್ರಕರಣಗಳು ನಡೆಯದಿದ್ದರೆ ತಾವು ಅಪರಾಧಿಗಳ ಪರ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ವಕೀಲ ಎ. ಪಿ. ಸಿಂಗ್ ಹೇಳಿದರು.
‘ಈ ತೀರ್ಪಿನಿಂದ ಪಾಠ ಕಲಿತು ದೇಶದಲ್ಲಿ ಎರಡು ತಿಂಗಳ ಅವಧಿಯಲ್ಲಿ ಅತ್ಯಾಚಾರಗಳೆ ಸಂಭವಿಸಿಲ್ಲ ಎಂದಾದರೆ ನನ್ನ ಕಕ್ಷಿದಾರರನ್ನು ನೇಣಿಗೆ ಏರಿಸಬಹುದು ಎಂದು ಲಿಖಿತವಾಗಿ ಒಪ್ಪಿಗೆ ನೀಡುತ್ತೇನೆ’ ಎಂದು ತಿಳಿಸಿದ್ದಾರೆ.
ಮಧ್ಯಾಹ್ನ ಊಟದ ನಂತರ ಸಿಬ್ಬಂದಿ, ಕಕ್ಷಿದಾರರು, ವಕೀಲರು ಮತ್ತು ಇತರರು ಕುತೂಹಲದಿಂದ ತೀರ್ಪಿಗಾಗಿ ಎದುರು ನೋಡುತ್ತಿದ್ದರಿಂದ ನ್ಯಾಯಾಲಯದಲ್ಲಿ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.
ಆರು ಅಂತಸ್ತಿನ ನ್ಯಾಯಾಲಯದ ಮೊಗಸಾಲೆ ಜನರಿಂದ ಕಿಕ್ಕಿರಿದಿತ್ತು. ನ್ಯಾಯಾಲಯದ ಹೊರಗಡೆಯೂ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ತೀರ್ಪು ಹೊರಬೀಳುತ್ತಿದ್ದಂತೆ ಹೊರಗಿದ್ದ ಜನರು, ‘ಬಾಲ ಅಪರಾಧಿಗೂ ಗಲ್ಲು ಶಿಕ್ಷೆಯಾಗಬೇಕು’ ಎಂದು ಘೋಷಣೆ ಕೂಗಿದರು.