ಮೂಡುಬಿದಿರೆ: ‘ಎಲ್ಲ ಕಾಲಘಟ್ಟದ ಸಾಹಿತ್ಯದಲ್ಲೂ ಸಮಾಜ ಚಿಂತನೆಯ ಅಂಶಗಳು ಇವೆ’ ಎಂದು ಖ್ಯಾತ ವಿಮರ್ಶಕ ಸಿ.ಎನ್.ರಾಮಚಂದ್ರನ್ ಅಭಿಪ್ರಾಯಪಟ್ಟರು.
ಆಳ್ವಾಸ್ ವಿಶ್ವ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಭಾನುವಾರ ನಡೆದ ‘ಕನ್ನಡ ಸಾಹಿತ್ಯ ಸಮಾಜ ಚಿಂತನೆ’ ವಿಚಾರಗೋಷ್ಠಿಯಲ್ಲಿ ‘ಹೊಸಗನ್ನಡ ಸಾಹಿತ್ಯ’ ವಿಷಯ ಮೇಲೆ ಅವರು ಮಾತನಾಡಿದರು.
‘ಹೊಸಗನ್ನಡ ಸಾಹಿತ್ಯದಲ್ಲಿ ಪ್ರಭುತ್ವ, ಪ್ರತಿರೋಧ ಹಾಗೂ ಅಸ್ಮಿತೆಯ ಆತಂಕಗಳು ಪರಸ್ಪರ ಮುಪ್ಪುರಿಗೊಂಡಿವೆ. ಈ ಕಾಲದ ಎಲ್ಲ ಸಾಹಿತ್ಯಕ ಚಳವಳಿಗಳಲ್ಲೂ ಪ್ರಭುತ್ವದ ಪ್ರತಿರೋಧತೆ ಕಂಡುಬಂದಿದೆ’ ಎಂದು ತಿಳಿಸಿದರು.
‘ನವೋದಯದಲ್ಲಿ ಅಸ್ಮಿತೆಯು ಉಪನಿಷತ್ ತತ್ವಗಳನ್ನಾಧರಿಸಿದ್ದರೆ, ಪ್ರಗತಿಶೀಲ ಸಾಹಿತ್ಯದಲ್ಲಿ ವರ್ಗಹೀನ ಸಮಾಜವನ್ನು ಕಟ್ಟುವುದು, ನವ್ಯರ ಕಾಲಘಟ್ಟದಲ್ಲಿ ವ್ಯಕ್ತಿಯ ವಿಕಸನ ಸಾಧ್ಯವಿರುವ ವ್ಯವಸ್ಥೆಯನ್ನು ಕಟ್ಟುವುದು ಹಾಗೂ ದಲಿತ ಬಂಡಾಯದಲ್ಲಿ ಯಾವ ಯಾವ ವಿಚಾರಗಳು ಕೇಂದ್ರದಲ್ಲಿದೆಯೋ ಅವುಗಳನ್ನು ಪಲ್ಲಟಗೊಳಿಸುವ ಅಸ್ಮಿತೆಗಳು ಪ್ರಧಾನವಾಗಿ ಕಂಡಿವೆ’ ಎಂದು ಅವರು ವಿಶ್ಲೇಷಿಸಿದರು.
‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ತತ್ಕಾಲದ ಸಮಾಜಕ್ಕೆ ಸ್ಪಂದಿಸುವ ಚಿತ್ರಣ ಇದೆ. ವರ್ಗಭೇದ, ವರ್ಣಭೇದ, ಲಿಂಗಭೇದ ಹಾಗೂ ರಾಜನ ಪರಮಾಧಿಕಾರ ಹೀಗೆ ಆ ಕಾಲದ ಸಮಾಜದಲ್ಲಿದ್ದ ಅಂಶಗಳನ್ನು ಕುರಿತು ಕವಿಗಳು ಹೇಳಿದ್ದಾರೆ’ ಎಂದು ವಿಮರ್ಶಕ ಎನ್.ಎಸ್.ತಾರಾನಾಥ್ ತಿಳಿಸಿದರು.
ಅವರು ‘ಹಳೆಗನ್ನಡ ಸಾಹಿತ್ಯದಲ್ಲಿ ಸಮಾಜ ಚಿಂತನೆ’ ಕುರಿತು ಮಾತನಾಡಿ, ‘ಓಲಗಿಸಿ ಬಾಳ್ವುದೇ ಕಷ್ಟಂ ಇಳಾದಿನಾಥರಂ’ ಎಂದು ಪಂಪ ಹೇಳುವ ಮೂಲಕ ರಾಜನನ್ನು ವಿಡಂಬಿಸಿದ್ದಾನೆ. ಹಾಗೆಯೇ, ಆದಿಪುರಾಣದಲ್ಲಿ ಭರತ ಭೂಮಂಡಲ ಗೆದ್ದು ತನ್ನ ಹೆಸರನ್ನು ವೃಷಭಾಚಲದಲ್ಲಿ ಬರೆಸಲು ಹೋದಾಗ ಅಲ್ಲಿ ಎಲ್ಲ ಕಡೆಯೂ ಪೂರ್ವ ಅರಸರ ಹೆಸರಿದ್ದು ತನ್ನ ಹೆಸರಿಗೆ ಜಾಗವಿಲ್ಲದ್ದನ್ನು ಕಂಡು “ಕೊಳಕೊಂಡ ಗರ್ವರಸಂ ಸೋರ್ದುದು’ ಎಂದು ಹೇಳುವ ಮೂಲಕ ರಾಜನ ಅಧಿಕಾರವನ್ನು ತಗ್ಗಿಸುವ ಘಟನೆಗಳನ್ನು ಸಾಂಕೇತಿಕವಾಗಿ ಚಿತ್ರಿಸುತ್ತಾನೆ. ಆದಿಪುರಾಣದಲ್ಲಂತೂ ಆ ಕಾಲಘಟ್ಟದ ಸಮಾಜದ ಜ್ಞಾನದ ವಿವಿಧ ಶಾಖೆಗಳು, ಸಂಗತಿಗಳನ್ನು ಅವನು ಅಭಿವ್ಯಕ್ತಿಸಿದ್ದಾನೆ’ ಎಂದರು.
ಇದೇ ರೀತಿಯ ವಿಚಾರಗಳು ವಡ್ಡಾರಾಧನೆ, ರನ್ನನ ಕೃತಿಗಳು ಇಲ್ಲೆಲ್ಲ ಕಾಣಬಹುದಾಗಿದೆ. ಅದರಲ್ಲೂ ರನ್ನನ ಕೃತಿಗಳಲ್ಲಿ ಯುದ್ದದಿಂದಾಗುವ ಹಾನಿಯ ಕುರಿತಾದ ಹಲವು ಸನ್ನಿವೇಶಗಳು ಮೂಡಿ ಬಂದಿವೆ. ಪತಿ ಮೃತಪಟ್ಟಾಗಲೂ ಚಾರಿತ್ರಿಕ ಶುದ್ಧತೆಯನ್ನು ಕಾಯ್ದುಕೊಂಡು, ಮಹಾನ್ ಸಾಧನೆ ಮಾಡುವ ಅತ್ತಿಮಬ್ಬೆಯ ಚಿತ್ರಣವನ್ನು ಕಟ್ಟಿಕೊಡುತ್ತಾನೆ. ವಡ್ಡಾರಾಧನೆಯಲ್ಲಿ ಸುಕುಮಾರಸ್ವಾಮಿಯ ಕಥೆಯಲ್ಲಿ ದಲಿತ ಸ್ತ್ರೀಗೆ ದೀಕ್ಷೆ ಕೊಡುವ ಮೂಲಕ ವರ್ಣಭೇದಕ್ಕೆ ಪ್ರತಿಕ್ರಿಯೆಯನ್ನು ಅದರಲ್ಲಿ ಕಾಣಬಹುದು’ ಎಂದು ವಿಶ್ಲೇಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.