ಯಾದಗಿರಿ: ಸಮಾಜದಲ್ಲಿ ಎಚ್ಐವಿ, ಏಡ್ಸ್ ರೋಗಿಗಳನ್ನು ಮಾನವೀಯತೆಯಿಂದ ನೋಡಿಕೊಳ್ಳಬೇಕು. ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಸಂಬಂಧಪಟ್ಟ ವೈದ್ಯರು ಕೂಡ ಸಂಘಟನಾತ್ಮಕ ರೀತಿಯಲ್ಲಿ ವೈದ್ಯಕೀಯ ನೆರವನ್ನು ಈ ರೋಗಿಗಳಿಗೆ ನೀಡಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಭಗವಂತ ಅನವಾರ್ ಸಲಹೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹೆಚ್ಚಿನ ಜನರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಅದರಲ್ಲಿಯೂ ಯುವಜನಾಂಗ ಹೆಚ್ಚಾಗಿ ಈ ರೋಗಕ್ಕೆ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದರು.
ಜೀವಕ್ಕೆ ಮಾರಕವಾಗಿರುವ ಏಡ್ಸ್ ರೋಗ ಬರದಂತೆ ಮುಂಜಾಗ್ರತೆ ವಹಿಸಬೇಕು. ಎಚ್ಐವಿ ಸೋಂಕು ತಗುಲಿದಲ್ಲಿ ಈ ರೋಗ ನಿಯಂತ್ರಣ ಸಾಧ್ಯವಿದ್ದು, ಏಡ್ಸ್ ರೋಗಕ್ಕೆ ತಿರುಗಿದಾಗ ಇದನ್ನು ಸಂಪೂರ್ಣ ವಾಸಿ ಮಾಡಲು ಅಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಏಕ ಪತಿ–ಪತ್ನಿ ವ್ರತಾಚಾರಣೆ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದ ಅವರು, ಅಸುರಕ್ಷಿತ ಲೈಂಗಿಕತೆಯಿಂದ ದೂರ ಉಳಿಯಲು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಪ್ರತಿಪಕ್ಷದ ನಾಯಕ ಬಸವರಾಜ ಖಂಡ್ರೆ ಮಾತನಾಡಿ, ಎಚ್ಐವಿ, ಏಡ್ಸ್ ರೋಗಿಗಳ ಸಂಖ್ಯೆಯನ್ನು ಸೊನ್ನೆಗೆ ತರಲು ಅಂಗನವಾಡಿಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಮಾಜ ಪ್ರಜ್ಞಾವಂತ ನಾಗರಿಕರು ಈ ರೋಗದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಸದ್ದಿಲ್ಲದೇ ಬರುವ ಮದ್ದಿಲ್ಲದ ರೋಗ ಇದಾಗಿರುವುದರಿಂದ ಎಲ್ಲರೂ ಎಲ್ಲರಿಕೆ ವಹಿಸುವಂತೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಭೀಮರಾಯ ಹಯ್ಯಾಳಪ್ಪನೋರ್ ಕಾರ್ಯಕ್ರಮ ಉದ್ಫಾಟಿಸಿದರು. ಡಾ. ಅಭಯಕುಮಾರ ಸ್ವಾಗತಿಸಿದರು. ಡಾ.ಸಿದ್ರಾಮ ಹೊನ್ಕಲ್ ನಿರೂಪಿಸಿದರು. ಓಂಪ್ರಕಾಶ ಕಟ್ಟಿಮನಿ ವೇದಿಕೆಯಲ್ಲಿದ್ದರು.
ಇದಕ್ಕೂ ಮುನ್ನಾ ನಗರದ ಪ್ರವಾಸಿ ಮಂದಿರದಲ್ಲಿ ಏಡ್ಸ್ ಜಾಗೃತಿ ಜಾಥಾಕ್ಕೆ, ಭೀಮರಾಯ ಹಯ್ಯಾಳಪ್ಪನೋರ್ ಚಾಲನೆ ನೀಡಿದರು.
ಪ್ರವಾಸಿ ಮಂದಿರದಿಂದ ಆರಂಭವಾದ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜಿಲ್ಲಾ ಪಂಚಾಯಿತಿ ಸಭಾಂಗಣ ತಲುಪಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.