ಯಾದಗಿರಿ: ಇಂದಿನ ಪರೀಕ್ಷಾ ಪದ್ಧತಿಯು ವಿದ್ಯಾರ್ಥಿಗಳ ಮೇಲೆ ಅನವಶ್ಯಕ ಮಾನಸಿಕ ಒತ್ತಡ ಹಾಗೂ ನಿರಂತರ ಪರೀಕ್ಷೆಯ ಭೂತವನ್ನು ಹೇರಿದೆ. ನಿತ್ಯ ಶಿಕ್ಷಕರು, ವಿದ್ಯಾರ್ಥಿಗಳ ದಿನಚರಿಯನ್ನು ಸಿದ್ಧಪಡಿಸುವದರಲ್ಲಿ ಮುಳುಗಿದ್ದಾರೆ. ವಿದ್ಯಾರ್ಥಿಗಳು ಕಲಿಕೆಯಿಂದ ಹಾಗೂ -ಸಾಂಸ್ಕೃತಿಕ ಚಟುವಟಿಕೆಗಳಿಂದ ವಂಚಿತರಾಗುತ್ತಿದ್ದಾರೆ. ಗುಣಮಟ್ಟದ ಶಿಕ್ಷಣವನ್ನು ತುರ್ತು ನಿಗಾ ಘಟಕಕ್ಕೆ ಸೇರಿಸಲಾಗಿದೆ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಸಂಘಟನಕಾರ ಡಾ. ಚಂದ್ರಗಿರೀಶ ವಿಷಾದ ವ್ಯಕ್ತಪಡಿಸಿದರು.
ಇಲ್ಲಿನ ಜವಾಹರ್ ಶಿಕ್ಷಣ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಕ್ಷಣ ಉಳಿಸಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಮೆರಿಕದ ಪ್ರಯೋಗಗಳಿಂದ ಉತ್ತೇಜಿತರಾಗಿ -ಕಲಿಕಾ ಪ್ರಕ್ರಿಯೆ ಹಾಗೂ ಪರೀಕ್ಷಾ ವಿಧಾನಗಳಲ್ಲಿ ಹಲವಾರು ಸುಧಾರಣೆಗಳನ್ನು ಹೇರಲಾಗುತ್ತಿದೆ. ಇವು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು. ಕಾಲದ ಪರೀಕ್ಷೆಯಲ್ಲಿ ಸಾಬೀತಾದ ಬೋಧನಾ ವಿಧಾನ ಕ್ರಮಗಳು, ಪಠ್ಯಕ್ರಮ, ವಿಷಯಗಳು ಹಾಗೂ ಪರೀಕ್ಷಾ ಪದ್ಧತಿಗಳನ್ನು ಆಮೂಲಾಗ್ರವಾಗಿ ತಿರುಚಲಾಗಿದೆ. ವಿಶ್ವಬ್ಯಾಂಕ್ ಪ್ರಾಯೋಜಿತ ನಲಿ-ಕಲಿ ಪದ್ಧತಿಯು ಕ್ರಮಬದ್ಧವಾಗಿ ಭಾಷೆಯನ್ನು ಕಲಿಯುವ ಹಾಗೂ ಜ್ಞಾನಾರ್ಜನೆ ಪ್ರಕ್ರಿಯೆಯನ್ನೇ ಕುಂಠಿತಗೊಳಿಸುತ್ತದೆ ಎಂದು ಹೇಳಿದರು.
ನಮ್ಮನ್ನು ಆಳಿದವರಿಗೆ ಶಿಕ್ಷಣವು ಮೂಲಭೂತ ಹಕ್ಕು ಎಂದು ಘೋಷಿಸಲು ಸುದೀರ್ಘ 62 ವರ್ಷಗಳೇ ಬೇಕಾಯಿತು. ಆದಾಗ್ಯೂ, ನಿಜವಾಗಿಯೂ ಶಿಕ್ಷಣವು ಹಕ್ಕಾಗಿದೆಯೇ? ಇಂದು ಯಾರಾದರೂ ಶಿಕ್ಷಣದಿಂದ ವಂಚಿತರಾದರೆ ಅವರಿಗೆ ನ್ಯಾಯ ದೊರಕುತ್ತದೆಯೇ ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ ಎಂದರು.
ಒಂದೆಡೆ ಸರ್ಕಾರವು ಹಲವಾರು ಶಾಲೆಗಳನ್ನು ಮುಚ್ಚುತ್ತಿದೆ. ಮತ್ತೊಂದೆಡೆ, ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲ ವರ್ಗದವರಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ 25ರಷ್ಟು ಸೀಟುಗಳನ್ನು ಕಾಯ್ದಿರಿಸುವ ಆದೇಶ ಹೊರಡಿಸಿದೆ. ಇದರ ಮೂಲಕ ಸರ್ಕಾರವು ಶಿಕ್ಷಣಕ್ಕಾಗಿ ತನ್ನ ಆರ್ಥಿಕ ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಸುಲಭ ಮಾರ್ಗವನ್ನು ಕಂಡುಕೊಂಡಿದೆ ಎಂದು ಆರೋಪಿಸಿದರು.
ಜಿಲ್ಲಾ ಸಂಚಾಲಕರಾದ ವೀರಭದ್ರಪ್ಪ ಮಾತನಾಡಿ, ಸೆ. 28 ಹಾಗೂ 29 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ರಾಜ್ಯ ಮಟ್ಟದ ಶಿಕ್ಷಣ ಉಳಿಸಿ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಸಯ್ಯದ್ ಶಂಶಲಾಂ ಪೀರಾ, ಎಐಡಿಎಸ್ಒ ಜಿಲ್ಲಾ ಸಮಿತಿ ಅಧ್ಯಕ್ಷೆ ಸಿ.ಕೆ. ಗೌರಮ್ಮ, ಸದಸ್ಯರಾದ ಬಸಮ್ಮ, ರತ್ನ, ಪುಷ್ಪ, ಆಕಾಶ, ಸುನೀತಾ, ಶಿವರಾಜ, ಆನಂದ, ವಿಜಯಕುಮಾರ್, ರಾಮು, ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.