ಬೆಂಗಳೂರು: ‘ವಿದ್ಯಾರ್ಥಿಗಳು ಕೇವಲ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದರೆ ಸಾಲದು, ಜೊತೆಗೆ ಸಾಮಾನ್ಯ ಜ್ಞಾನವನ್ನೂ ಬೆಳೆಸಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಕಿವಿಮಾತು ಹೇಳಿದರು.
ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಮಹಿಳಾ ಘಟಕ ಗುರುವಾರ ನಗರದಲ್ಲಿ ಏರ್ಪಡಿಸಿದ್ದ ‘ಭವಿಷ್ಯ ನಿರ್ಮಾಣ’ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಲು ಮೊದಲು ಜ್ಞಾನ ಸಂಪಾದನೆ ಮಾಡಬೇಕು. ಇಲ್ಲವಾದರೆ ಜೀವನದಲ್ಲಿ ಎದುರಾಗುವ ಪರಿಸ್ಥಿತಿಗಳನ್ನು ಸಮರ್ಥರಾಗಿ ಎದುರಿಸಲು ಸಾಧ್ಯವಾಗುವುದಿಲ್ಲ’ ಎಂದರು.
ಒಬ್ಬ ವ್ಯಕ್ತಿ ಬೆಳೆದು ಉನ್ನತ ಮಟ್ಟಕ್ಕೆ ಏರಲು ಸಮಾಜದ ಕೊಡುಗೆ ಅಪಾರವಾಗಿರುತ್ತದೆ. ಆದರೆ ಹೀಗೆ ಬೆಳೆದವರು ಸಮಾಜಕ್ಕಾಗಿ ಏನನ್ನೂ ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬದಲಾವಣೆ ಎಂಬುದು ಒಬ್ಬರಿಂದ ಪ್ರಾರಂಭವಾಗುತ್ತದೆ. ಹಾಗೆ ವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟಿದ ನಂತರ ಸಮಾಜಕ್ಕೆ ಯಾವ ರೀತಿಯಲ್ಲಾದರೂ ಕೊಡುಗೆಯನ್ನು ನೀಡಬೇಕು ಎಂದು ಸಲಹೆ ನೀಡಿದರು. ಸ್ನೇಹಿತರನ್ನಾಗಲಿ ಅಥವಾ ಕುಟುಂಬದ ಸದಸ್ಯರನ್ನಾಗಲಿ ಬೇರೆಯವರೊಂದಿಗೆ ಹೋಲಿಕೆ ಮಾಡುವುದನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಡಿ. ಹೋಲಿಕೆ ಮಾಡುವುದು ಅಪಾಯಕಾರಿ ಬೆಳವಣಿಗೆ ಎಂದು ಸಲಹೆ ನೀಡಿದರು.
ಎಲ್ಲೂ, ಯಾರನ್ನೂ ನಿಯಂತ್ರಿಸಲು ಪ್ರಯತ್ನಿಸಬೇಡಿ. ಅದರಿಂದ ಒಳ್ಳೆಯ ಪ್ರತಿಫಲ ದೊರೆಯುವುದಿಲ್ಲ. ಬದಲಾಗಿ ಉತ್ತಮವಾಗಿ ನಾಯಕನಂತೆ ದಾರಿ ತೋರಿಸಿ, ಅದರಿಂದ ಒಳ್ಳೆಯ ಫಲ ದೊರೆಯುತ್ತದೆ ಎಂದು ಹೇಳಿದರು. ಪ್ರಾಂಶುಪಾಲರಾದ ಡಾ.ಮಲ್ಲಿಕಾರ್ಜುನ ಬಾಬು ಉಪಸ್ಥಿತರಿದ್ದರು.