ಮೂಡುಬಿದಿರೆ: ‘ಕನ್ನಡ ಚಳವಳಿಗಾರರು ಮಕ್ಕಳನ್ನು ಮೊದಲು ಕನ್ನಡ ಮಾಧ್ಯಮದಲ್ಲಿ ಓದಿಸಲಿ, ಇಂದಿನ ದಿನಗಳಲ್ಲಿ ಕನ್ನಡ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾದ ಪರಿಸ್ಥಿತಿ ಬಂದಿದೆ.. ಕನ್ನಡ ಹೋರಾಟ ಕ್ರಿಯಾಶೀಲವಾದಾಗ ಮಾತ್ರ ಭಾಷೆ ಉಳಿಯುತ್ತದೆ’.
– ಇವು ವಿಶ್ವ ನುಡಿಸಿರಿ ವಿರಾಸತ್ ಸಮ್ಮೇಳನದ ಪಂಜೆ ಮಂಗೇಶರಾಯ ವೇದಿಕೆಯ ವಿದ್ಯಾರ್ಥಿಸಿರಿಯಲ್ಲಿ ಕನ್ನಡ–ಇಂಗ್ಲಿಷ್ ಮುಖಾಮುಖಿಯಲ್ಲಿ ವ್ಯಕ್ತವಾದ ಅನಿಸಿಕೆಗಳು.
ಮೊದಲಿಗೆ ಉಜಿರೆಯ ಪದ್ಮಾ ಭಟ್ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಇಂದು ಅಪ್ಪ–ಅಮ್ಮ ಎಲ್ಲ ಮಾಯವಾಗಿ ‘ಮಮ್ಮಿ ಡ್ಯಾಡಿ’ ಸಂಸ್ಕೃತಿ ಬಂದಿದೆ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡದಲ್ಲಿ ಮಾತನಾಡಿದರೆ ದಂಡ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ. ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಗೆ ಮಾತೃಭಾಷೆ ಸಹಕಾರಿಯಾಗಲಿದೆ ಎಂದರು.
‘ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ಕೆಲಸ ಸಿಗುತ್ತದೆ ಎಂಬ ಭಾವನೆ ಹೋಗಬೇಕು. ಸರ್.ಎಂ.ವಿಶ್ವೇಶ್ವರಯ್ಯ, ಡಾ.ಸಿ.ಎನ್.ಆರ್.ರಾವ್ ಅಂತಹ ಮಹಾನ್ ವ್ಯಕ್ತಿಗಳು ಕನ್ನಡದಲ್ಲೇ ಓದಿ ಭಾರತ ರತ್ನ ಪಡೆದುಕೊಂಡಿದ್ದಾರೆ. ಶಿಕ್ಷಣ ಜಾಗೃತವಾದಾಗ ಭಾಷೆ ಬೆಳೆಯುತ್ತದೆ’ ಎಂದರು.
ತೆಂಕನಿಡಿಯೂರಿನ ರಿಹಾಬ್ ಶಾಹಿನ್ ಬೇಗಂ ಮಾತನಾಡಿ, ‘ಡಾರ್ವಿನ್ ಸಿದ್ಧಾಂತದಂತೆ ಕನ್ನಡ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾದ ಪರಿಸ್ಥಿತಿ ಬಂದಿದೆ. ಕಡ್ಡಾಯ ಶಿಕ್ಷಣ, ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಡ್ಡಾಯ ಮಾಡಿದ್ದು, ಇದು ಎಷ್ಟರ ಮಟ್ಟಿಗೆ ಜಾರಿಯಾಗಿದೆ ಎಂಬುದನ್ನು ಚಿಂತಿಸಬೇಕು. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಳಪೆಯಾಗಿ ಪಾಠ ಮಾಡುತ್ತಿರುವುದು ಕಂಡು ಬಂದಿದೆ’ ಎಂದರು.
ಹಿಂದೆ ಕನ್ನಡ–ಸಂಸ್ಕೃತಿ ಮುಖಾಮುಖಿಯಾಗುತ್ತಿದ್ದವು. ಆದರೆ ಈಗ ಕನ್ನಡ–ಇಂಗ್ಲಿಷ್ ಮುಖಾಮುಖಿಯಾಗತ್ತಿವೆ. ಕನ್ನಡ ಚಿತ್ರಗಳಲ್ಲಿ ಕಂಗ್ಲಿಷ್ ಮುಖಾಮುಖಿಯಾಗುತ್ತಿವೆ. ಎಣ್ಣೆಯೂ ಬೇಕು, ತುಪ್ಪವೂ ಬೇಕು ಎಂಬಂತೆ ಆಗುತ್ತಿದೆ. ಇಂದು ಐಟಿ–ಬಿಟಿ ಕಂಪೆನಿಗಳಲ್ಲಿ ಕನ್ನಡವನ್ನು ಐಚ್ಛಿಕವಾಗಿ ತೆಗೆದುಕೊಂಡಿದ್ದರೆ ಕೆಲಸ ಸಿಗುವುದಿಲ್ಲ. ಇದು ನನ್ನ ಅನುಭವದಲ್ಲಿ ನಡೆದ ಘಟನೆ. ಇಂದಿನ ಜಾಗತೀಕರಣ ಸಂದರ್ಭದಲ್ಲಿ ಕನ್ನಡ–ಇಂಗ್ಲಿಷ್ ಎರಡೂ ಗೊತ್ತಿರಬೇಕು. ಆದರೆ ಕನ್ನಡ ಭಾಷೆ ಪ್ರೀತಿಸಬೇಕು ಎಂದರು.
ಪತ್ರಕರ್ತ ಜೋಗಿ ಮಾತನಾಡಿ, ಪ್ರಪಂಚದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿರುವ ಭಾಷೆ ಎಂದರೆ ಅದು ಕನ್ನಡ. ಕನ್ನಡ ಹೋರಾಟ ಕ್ರಿಯಾಶೀಲವಾದರೆ ಮಾತ್ರ ಭಾಷೆ ಉಳಿಯುತ್ತದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.