ಭಾರತೀಯ ಜನಸಂಘ ಸ್ಥಾಪನೆಯಾದಾಗಿನಿಂದ, ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವವರೆಗೆ ಶ್ರಮಿಸಿದ ಸಂಸದ ಜಗನ್ನಾಥರಾವ್ ಜೋಶಿ (1920–1991).
ಅಪಾರ ಹಾಸ್ಯ ಪ್ರಜ್ಞೆ, ಅಧ್ಯಯನ, ಹೋರಾಟದ ಮನೋಭಾವ, ಸಂಘಟನಾ ಶಕ್ತಿ ಮೇಳೈಸಿದ್ದ ಜೋಶಿ ಇಂದಿನ ಗದಗ ಜಿಲ್ಲೆಯ ನರಗುಂದದಲ್ಲಿ ಜನಿಸಿದರು. ಪದವಿ ನಂತರ ಸಮಾಜ ಸೇವೆಗೆ ತಮ್ಮನ್ನು ಮೀಸಲಿರಿಸಿಕೊಂಡು ಆರೆಸ್ಸೆಸ್ ಸೇರಿದರು. 1951ರಲ್ಲಿ ಜನಸಂಘದ ಕರ್ನಾಟಕದ ಸಂಘಟನಾ ಕಾರ್ಯದರ್ಶಿಯಾಗಿ ಮುಂದೆ ಭಾರತೀಯ ಜನಸಂಘ ಆರಂಭವಾದ ಮೇಲೆ ಅದರಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಜನಸಂಘದ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರಾಗಿದ್ದರು. ಕರ್ನಾಟಕದಲ್ಲಿ ಜನಸಂಘ ಮತ್ತು ಮುಂದೆ ಬಿಜೆಪಿ ಬೆಳೆಸುವುದರಲ್ಲಿ ಜೋಶಿ ಪಾತ್ರವಹಿಸಿದರು. 1981ರಲ್ಲಿ ಬಿಜೆಪಿ ಉಪಾಧ್ಯಕ್ಷರಾಗಿದ್ದರು.
ಕೊನೆ ತನಕ ಬ್ರಹ್ಮಚಾರಿಯಾಗಿ ಉಳಿದ ಇವರು ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿದ್ದರು. ಕರ್ನಾಟಕದವರೇ ಆದ ಇವರು ಮೊದಲ ಮೂರು ಸಲ ಲೋಕ ಸಭೆಗೆ ಜನಸಂಘದ ಟಿಕೆಟ್ನಿಂದ 1952, 1957, 1962ರಲ್ಲಿ ಕ್ರಮವಾಗಿ ಧಾರವಾಡ ಉತ್ತರ, ಪುಣೆ ಮತ್ತು ಮರಳಿ ಧಾರವಾಡ ಉತ್ತರದಿಂದ ಸ್ಪರ್ಧಿಸಿ ಸೋತರು. ಮಧ್ಯಪ್ರದೇಶದ ಭೋಪಾಲ್ ಮತ್ತು ಷಹಜಾಪುರ್ದಿಂದ 4 ಮತ್ತು 5 ನೇ ಲೋಕಸಭೆಗೆ ಆಯ್ಕೆಯಾದ ಇವರು 1967 ಮತ್ತು 1971ರಲ್ಲಿ ಗೆಲುವಿನ ರುಚಿ ಕಂಡರು. 1978–1984ರವೆರೆಗೆ ದೆಹಲಿಯಿಂದ ರಾಜ್ಯ ಸಭೆಗೆ ಪ್ರವೇಶ.
ಗೋವಾ ವಿಮೋಚನೆಗೆ ಹೋರಾಟ ನಡೆಸಿದ ಜಗನ್ನಾಥರಾವ್ ಅವರು 1955ರ ಜೂನ್ 25ರಂದು ಸತ್ಯಾಗ್ರಹಿಗಳ ತಂಡದೊಡನೆ ಗೋವಾ ಪ್ರವೇಶಿಸಿ ಬಂಧನಕ್ಕೆ ಒಳಗಾಗಿ, ಪೋರ್ಚುಗೀಸರಿಂದ ಚಿತ್ರಹಿಂಸೆ ಅನುಭವಿಸಿದರು. ಕರ್ನಾಟಕದವರೇ ಆದರೂ ಯಾವಾಗಲೂ ರಾಜ್ಯದ ಹೊರಗಿನಿಂದಲೇ ಗೆದ್ದು ಸಂಸತ್ ಪ್ರವೇಶಿಸಿದ್ದು ಇವರ ವಿಶೇಷ.