ಬೆಂಗಳೂರು: ‘ಕಲಿಕೆಯೆಂಬುದು ಹಿಂಸಾತ್ಮಕ ಪ್ರಕ್ರಿಯೆಯಾಗದೇ ಶೈಕ್ಷಣಿಕ ಅನುಭವವನ್ನು ನೀಡುವ ವ್ಯವಸ್ಥೆಯಾಗಿ ರೂಪುಗೊಳ್ಳಬೇಕು’ ಎಂದು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೇಶಕ ಎಚ್.ಎಸ್ ರಾಮರಾವ್ ಅಭಿಪ್ರಾಯಪಟ್ಟರು.
ಶ್ರುತ್ ಮತ್ತು ಸ್ಮಿತ್ ಸಂಸ್ಥೆಯು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಅಧ್ಯಾಪನ 2013’ ವಿಚಾರ ಸಂಕಿರಣದಲ್ಲಿ ‘ಶೈಕ್ಷಣಿಕ ಉತ್ಕೃಷ್ಟತೆಯ ತಾಣವಾಗಿ ಶಾಲೆಗಳು’ ಕುರಿತು ಉಪನ್ಯಾಸ ನೀಡಿದರು.
‘ಮಗುವಿನ ಒಟ್ಟು ಕಲಿಕಾ ಅವಧಿಯಲ್ಲಿ ಕೇವಲ ಭಾಷೆಗಳನ್ನೇ ಕಲಿಸಲಾಗುತ್ತಿದೆ. ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ ಸೇರಿದಂತೆ ಕಲಿಸುತ್ತಿರುವ ಭಾಷೆಗಳ ಸಂಖ್ಯೆ ನಾಲ್ಕಕ್ಕೂ ಮೀರಿದೆ. ಇದರಿಂದ ವಿಜ್ಞಾನ ಹಾಗೂ ಇತರೆ ವಿಷಯಗಳ ಬಗ್ಗೆ ಮಗುವಿಗೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
‘ಭಾಷೆಯಂತೆ, ಗಣಿತಶಾಸ್ತ್ರ, ವಿಜ್ಞಾನ, ಸಮಾಜಶಾಸ್ತ್ರದಂತಹ ವಿಷಯಗಳು ಕೂಡ ಮುಖ್ಯ ಎಂಬ ಅಂಶವನ್ನು ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಇದರಿಂದ ಮಗು ತನ್ನ ವಿದ್ಯಾರ್ಥಿ ಜೀವನದ ತುಂಬಾ ಬರೀ ಭಾಷೆಗಳನ್ನೇ ಕಲಿಯುತ್ತದೆ’ ಎಂದು ಹೇಳಿದರು.
ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಶಿಕ್ಷಕರೊಬ್ಬರು, ‘ಭಾಷೆಯೆಂಬುದು ಒಂದು ಸಂವಹನ ಮಾಧ್ಯಮ. ಭಾಷೆಯಿಲ್ಲದೇ ಇತರೆ ವಿಷಯಗಳನ್ನು ಕಲಿಸಲು ಸಾಧ್ಯವೇ ಇಲ್ಲ. ಭಾಷೆಯೇ ಬೇಡವೆಂಬುದು ಉದ್ಧಟತನವಾಗುತ್ತದೆ’ ಎಂದು ಹೇಳಿದರು.
‘ಅಮೆರಿಕ, ಬ್ರಿಟನ್ ಇತರೆ ದೇಶಗಳಲ್ಲಿ ವೈವಿಧ್ಯ ಭಾಷೆಗಳಿಲ್ಲ. ದೇಶವೂ ವೈವಿಧ್ಯ ಭಾಷೆ ಹಾಗೂ ಸಂಸ್ಕೃತಿಯಿಂದ ಕೂಡಿದೆ. ಮಾತೃ ಭಾಷೆ, ಜಾಗತಿಕ ಭಾಷೆ ಹಾಗೂ ರಾಷ್ಟ್ರ ಭಾಷೆಗಳು ಮಗುವಿಗೆ ಅಗತ್ಯವಾಗಿ ಬೇಕು’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಮರಾವ್, ‘ಭಾಷೆ ಬೇಡವೆಂದು ಎಲ್ಲಿಯೂ ಹೇಳಿಲ್ಲ. ಆದರೆ ಕಲಿಸುವ ಭಾಷೆಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು. ಈ ಅವಧಿಯಲ್ಲಿ ಇತರೆ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮೂರು ತಿಂಗಳಿನಲ್ಲಿ ಜರ್ಮನ್ ಭಾಷೆ ಕಲಿಯಲು ಸಾಧ್ಯವಾಗುವುದಾದರೆ ವಿದ್ಯಾರ್ಥಿ ಜೀವನವೆಲ್ಲ ಬರೀ ಭಾಷಾ ಕಲಿಕೆಗೆ ಮೀಸಲಿಡಬೇಕೆ?’ ಎಂದು ಪ್ರಶ್ನಿಸಿದರು.
‘ಮಗುವಿನ ಚಿಂತನಾಶಕ್ತಿಯನ್ನು ಉದ್ಧೀಪನಗೊಳಿಸಲು ಶಿಕ್ಷಣ ಪೂರಕವಾಗಿರಬೇಕು. ಒಂದೇ ವಿಷಯ, ಒಂದೇ ಶಿಕ್ಷಕ ಎಂಬ ಪಾಶ್ಚಿಮಾತ್ಯ ತತ್ವವನ್ನು ತೊರೆದು ಶಿಕ್ಷಕರಿಗೂ ಬಹುಮುಖಿ ಕೌಶಲವನ್ನು ಕಲಿಸಿಕೊಡಬೇಕು’ ಎಂದು ಸಲಹೆ ನೀಡಿದರು.
ಪಠ್ಯ ಪುಸ್ತಕ ತಲುಪಿಲ್ಲ: ಪಠ್ಯದ ಜತೆಗೆ ಪಠ್ಯೇತರ ವಿಚಾರಗಳೆಡೆಗೆ ಶಿಕ್ಷಕರು ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಮಗುವಿನ ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ ಎಂದು ರಾಮರಾವ್ ಹೇಳುತ್ತಿದ್ದಂತೆ ಶಿಕ್ಷಕರೊಬ್ಬರು ಎದ್ದು ನಿಂತು ಐದನೇ ತರಗತಿಯ ಪ್ರಥಮ ಭಾಷೆ, 8ನೇ ತರಗತಿಯ ತೃತೀಯ ಭಾಷೆಯ ಪುಸ್ತಕಗಳು ತಲುಪದೇ ಶಿಕ್ಷಕರು ಪರದಾಡುವಂತಾಗಿದೆ. ಶಿಕ್ಷಣ ವ್ಯವಸ್ಥೆಯನ್ನು ಉನ್ನತ ಮಟ್ಟಕ್ಕೆ ಏರಿಸುವ ಬಗ್ಗೆ ಭಾಷಣ ಬೇಡ, ಪ್ರಾಯೋಗಿಕವಾಗಿ ಏನನ್ನಾದರೂ ಮಾಡಬೇಕು. ಸೂಕ್ತ ಕಾಲದಲ್ಲಿ ಪಠ್ಯ ದೊರೆಯದೇ ಇದ್ದರೆ ಪಾಠ ಮಾಡುವುದಾದರೂ ಹೇಗೆ? ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ನನಗೆ ತಿಳಿದಿರುವಂತೆ ಎಲ್ಲ ವಿಷಯಗಳ ಕುರಿತ ಪಠ್ಯ ಪುಸ್ತಕಗಳು ಶಾಲೆಯನ್ನು ತಲುಪಿದೆ. ಇಂತಹ ಲೋಪಗಳಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಬೆಂಗಳೂರು, ವಿಜಾಪುರ ಸೇರಿ ಹಲವೆಡೆ ಪಠ್ಯಪುಸ್ತಕಗಳ ಕೊರತೆ ಎದುರಾಗಿದ್ದು, ಪೋಷಕರ ಎದುರು ತೀವ್ರ ಮುಜುಗರ ಎದುರಿಸುವಂತಾಗಿದೆ. ಶಿಕ್ಷಣ ವ್ಯವಸ್ಥೆ ಸುಧಾರಿಸಲು ಮೂಲ ಸೌಕರ್ಯಗಳನ್ನು ನೀಡಬೇಕು ಎಂದು ಶಿಕ್ಷಕರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.