ಧಾರವಾಡ: ‘ಇತ್ತೀಚಿನ ದಿನಗಳಲ್ಲಿ ಸಾರ್ವತ್ರಿಕ ಚುನಾವಣೆ ವೇಳೆ ದುಡ್ಡು ಕೊಟ್ಟು ಪತ್ರಿಕೆಗಳಲ್ಲಿ ಸುದ್ದಿ ಬರೆಸುವ (ಪೇಡ್ ನ್ಯೂಸ್) ಹಾವಳಿ ಕ್ಯಾನ್ಸರ್ ರೋಗದಂತೆ ಹರಡುತ್ತಿದೆ. ಇದು ಪತ್ರಿಕೋದ್ಯಮದ ನೈತಿಕತೆಗೆ ಸವಾಲು ಹಾಕುತ್ತಿದ್ದರೂ ಕೆಲ ಮಾಧ್ಯಮಗಳು ರೋಗವನ್ನು ಬೇಕೆಂತಲೇ ದೇಹದಲ್ಲಿ ಬಿಟ್ಟುಕೊಳ್ಳುತ್ತಿವೆ’ ಎಂದು ‘ದಿ ಹಿಂದೂ’ ಪತ್ರಿಕೆಯ ಸಂಪಾದಕ ಸಿದ್ಧಾರ್ಥ ವರದರಾಜನ್ ಕಳವಳ ವ್ಯಕ್ತಪಡಿಸಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಕರ್ನಾಟಕ ವಿಶ್ವವಿದ್ಯಾಲಯವು ಶುಕ್ರವಾರ ಸಿನೆಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಡಾ.ಎಸ್.ರಾಧಾಕೃಷ್ಣನ್ ಸ್ಮಾರಕ ಉಪನ್ಯಾಸ ಮಾಲೆಯಡಿ ‘ಸಮಕಾಲೀನ ಭಾರತದಲ್ಲಿ ಮಾಧ್ಯಮದ ಪಾತ್ರ’ ಕುರಿತು ಉಪನ್ಯಾಸ ನೀಡಿದ ಅವರು, ‘ಇತ್ತೀಚೆಗೆ ಕರ್ನಾಟಕ, ಉತ್ತರ ಪ್ರದೇಶ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ‘ಕಾಸಿಗಾಗಿ ಸುದ್ದಿ’ ಬರೆಯುವುದು ವ್ಯಾಪಕವಾಗಿ ನಡೆಯಿತು. ಸಣ್ಣ ಪತ್ರಿಕೆಗಳ ಮಾತಿರಲಿ ಬೃಹತ್ ಮಾಧ್ಯಮ ಸಂಸ್ಥೆಗಳೂ ದುಡ್ಡು ಪಡೆದು ರಾಜಕಾರಣಿಗಳ ಪರ ಬರೆದವು. ಇವು ಪತ್ರಕರ್ತರ ವೃತ್ತಿಪರತೆಗೆ ಸವಾಲು. ಹೊರಗಿನ ಯಾವುದಾದರೂ ತಲ್ಲಣಗಳನ್ನು, ಬೆದರಿಕೆಗಳನ್ನು ತಡೆದುಕೊಳ್ಳಬಹುದು. ಇದು ಪತ್ರಿಕಾ ರಂಗದ ಒಳಗಿನಿಂದಲೇ ಆಗುತ್ತಿರುವ ವಿದ್ಯಮಾನ. ಹಾಗಾಗಿ ಇದು ಅತ್ಯಂತ ಅಪಾಯಕಾರಿ’ ಎಂದರು.
‘1995ಕ್ಕೂ ಮೊದಲು ಕೇವಲ 35 ಚಾನೆಲ್ಗಳಿದ್ದವು. ಈ ಸಂಖ್ಯೆ ಕಳೆದ ಮಾರ್ಚ್ ಅಂತ್ಯಕ್ಕೆ 840ಕ್ಕೇರಿದೆ. ಅದರಲ್ಲಿ 100ಕ್ಕೂ ಅಧಿಕ ಚಾನೆಲ್ಗಳು ಸುದ್ದಿವಾಹಿನಿಗಳಾಗಿವೆ. ಸುದ್ದಿವಾಹಿನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೆ ಪತ್ರಿಕೆಗಳ ಪ್ರಸರಣ ಸಂಖ್ಯೆ ಮಾತ್ರ ಕುಸಿತ ಕಾಣುತ್ತಿದೆ’ ಎಂದು ಹೇಳಿದರು.
ಪತ್ರಿಕಾ ರಂಗವನ್ನು ನಿಯಂತ್ರಣದಲ್ಲಿಡಲು ರಾಜಕಾರಣಿಗಳು, ಕಾರ್ಪೊರೇಟ್ ಕುಳಗಳು ನಿರಂತರವಾಗಿ ಯತ್ನಿಸುತ್ತಲೇ ಇರುತ್ತವೆ. ವಸ್ತುನಿಷ್ಠ ಸುದ್ದಿ ಬರೆದರೂ ಬಹುತೇಕ ಸಂದರ್ಭಗಳಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳನ್ನು ಪತ್ರಿಕೆಯ ಸಂಪಾದಕರು, ಪ್ರಕಾಶಕರು ಹಾಗೂ ವರದಿಗಾರರ ವಿರುದ್ಧ ದಾಖಲಿಸುತ್ತಾರೆ. ಅಂತಿಮವಾಗಿ ಎಷ್ಟೋ ಪ್ರಕರಣಗಳು ಖುಲಾಸೆಯಾಗುತ್ತವೆ. ಆದರೂ ಮೊಕದ್ದಮೆ ಹೂಡುವವರಿಗೆ ನಮ್ಮನ್ನು ಅವರ ತಂಟೆಗೆ ಬರದಂತೆ ತಡೆಯುವುದೇ ಆಗಿರುತ್ತದೆ.
ಐಟಿ ಕಾಯ್ದೆಯ ಹೆಸರಿನಲ್ಲಿ ಪತ್ರಿಕೆಗಳ ಆನ್ಲೈನ್ ಸುದ್ದಿಗಳನ್ನು ಭೂತಗನ್ನಡಿ ಇಟ್ಟು ನೋಡಿ ಅವುಗಳಲ್ಲೇ ತಪ್ಪನ್ನು ಹುಡುಕಿ ಪ್ರಕರಣ ದಾಖಲಿಸುತ್ತಾರೆ. ಪತ್ರಿಕೆಗಳನ್ನು ಮಣಿಸಲು ಐಟಿ ಕಾಯ್ದೆಯ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ವಿಶ್ಲೇಷಿಸಿದರು.
ಕುಲಪತಿ ಡಾ.ಎಚ್.ಬಿ.ವಾಲೀಕಾರ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವೆ ಡಾ.ಚಂದ್ರಮಾ ಕಣಗಲಿ, ಮೌಲ್ಯಮಾಪನ ಕುಲಸಚಿವ ಡಾ.ಕೆ.ಆರ್.ದುರ್ಗಾದಾಸ್, ಪ್ರಾಧ್ಯಾಪಕ ಡಾ.ಹರೀಶ ರಾಮಸ್ವಾಮಿ ವೇದಿಕೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.