ರೋಣ: ಪಟ್ಟಣದಿಂದ ಅಣತಿ ದೂರದಲ್ಲಿರುವ ಜಿಗಳೂರ ಕೆರೆಯಿಂದ ಗಜೆಂದ್ರಗಡ, ನರೇಗಲ್ ಹಾಗೂ 7 ಗ್ರಾಮಗಳಿಗೆ ಕುಡಿಯುವ ನೀರು ಪೋರೈಕೆ ಯೋಜನೆಯಿಂದ ರಾಜಕೀಯ ದುರುದ್ದೇಶಕ್ಕಾಗಿ ಹಿಂದಿನ ಅವಧಿಯಲ್ಲಿ ರೋಣ ಪಟ್ಟಣವನ್ನು ಕೈ ಬಿಡಲಾಗಿತ್ತು. ಆದರೆ ಅದನ್ನು ಪರಾಮರ್ಶಿಸಿ ಪಟ್ಟಣಕ್ಕೆ ಶಾಸ್ವತ ನೀರು ಒದಗಿಸುವ ಉದ್ದೇಶಕ್ಕಾಗಿ ಸೇರಿಸಲಾಗಿದೆ. ಇದನ್ನೇ ನೆಪ ಮಾಡಿಕೊಂಡು ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸುವುದು ಸರಿಯಲ್ಲ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು
ಅವರು ಶನಿವಾರ ಪಟ್ಟಣದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸದಸ್ಯ ಶಫೀಕ್ ಮುಗನೂರ, ಸಭೆ ಪ್ರಾರಂಭವಾಗುತ್ತಿದ್ದಂತೆ ಗಜೆಂದ್ರಗಡ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ರೋಣ ಪಟ್ಟಣಕ್ಕೆ ನೀರು ಪೋರೈಕೆಯಾಗುವುದನ್ನು ವಿರೋಧಿಸುತ್ತಿರುವುದು ಸರಿಯಾದ ಕ್ರಮವಲ್ಲ. ಅಲ್ಲಿನ ಕೆಲ ಸದಸ್ಯರು ರಾಜಕೀಯ ದುರುದ್ದೇಶದಿಂದ ಹೇಳಿಕೆಯನ್ನು ನೀಡಿ ಸಾರ್ವಜನಿಕರಿಗೆ ತಪ್ಪು ಸಂದೇಶ ಕಳುಹಿಸುತ್ತಿರುವುದು ಸರಿಯಲ್ಲ. ಗಜೇಂದ್ರಡ, ನರೇಗಲ್ ಉಳಿದ 7 ಗ್ರಾಮ ಬೇರೆ, ಬೇರೆಯಲ್ಲ, ನೀರು ಎಲ್ಲರಿಗೂ ಬೇಕು. ವಿನಾಕಾರಣ ರಾಜಕೀಯ ಬೇರೆಸಿದರೆ ನಾವು ಹೋರಾಟಕ್ಕೆ ಸಿದ್ಧವಾಗಬೇಕಾಗುತ್ತದೆ. ಈ ಬಗ್ಗೆ ಠರಾವು ಪಾಸ್ ಮಾಡಿ ಎಂದು ಒತ್ತಾಯಿಸಿದರು
ನಂತರ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ ಕ್ಷೇತ್ರದ ಪ್ರತಿಯೊಂದು ಗ್ರಾಮದ ಅಭಿವೃದ್ಧಿಯಾಗಬೇಕು ಗಜೇಂದ್ರಗಡ, ನರೇಗಲ್ ಉಳಿದ 7 ಗ್ರಾಮಗಳ ಜನತೆಗೆ ರೋಣ ಪಟ್ಟಣವನ್ನು ಯೋಜನೆಯಲ್ಲಿ ಸೇರಿಸುವುದರಿಂದ ಯಾವದೇ ತೋಂದರೆಯಾಗುವುದಿಲ್ಲ. ಇದಕ್ಕಾಗಿ ಸದ್ಯದ ಕೆರೆಯ ವಿಸ್ತೀರ್ಣವನ್ನು ಹೆಚ್ಚಿಸುವ ಸಲುವಾಗಿ 40 ಕೋಟಿ ರೂಪಾಯಿ ಯೋಜನೆಯನ್ನು ರೂಪಿಸಲಾಗಿದೆ. ಆದ್ಯತೆಯ ಮೇರೆಗೆ ಎಲ್ಲರಿಗೂ ಅನೂಕೂಲ ಕಲ್ಪಿಸುವ ಉದ್ದೇಶವಿದೆ. ರಾಜಕೀಯ ಹತಾಶಾ ಭಾವನೆಯಿಂದ ಹೇಳಿಕೆಯನ್ನು ನೀಡಿ ಜನತೆಯಲ್ಲಿ ಗೊಂದಲ ಉಂಟು ಮಾಡುವುದು ಸರಿಯಲ್ಲ ಎಂದರು.
ಅಂಗವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಿ: ಕೆಲವು ವಾರ್ಡ್ಗಳ ಮಹಿಳಾ ಸದಸ್ಯರು ಮುಖ್ಯಾಧಿಕಾರಿ ಮತ್ತು ಪುರಸಭೆಯ ಅಧ್ಯಕ್ಷರಿಗೆ ತಮ್ಮ ವಾರ್ಡ್ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ವಿನಂತಿ ಪತ್ರ ಬರೆದದ್ದನ್ನು ಸಭೆಗೆ ಎಂ.ಬಿ.ಅಂಗಡಿ ಓದಿ ಹೇಳುತ್ತಿದ್ದಂತೆ ಸದಸ್ಯ ಶಫೀಕ್ ಮುಗನೂರ ಎದ್ದು ನಿಂತು ಇದು ಸರಿಯಾದ ಕ್ರಮವಲ್ಲ, ಮಹಿಳಾ ಸದಸ್ಯರಿಗಾಗಿ ಒಂದು ಸಭೆಯನ್ನು ಆಯೋಜಿಸಿ ಇಲ್ಲಿರುವ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಸಾರ್ವಜನಿಕರ ಹಾಗೆ ಸದಸ್ಯರು ಅರ್ಜಿ ಬರೆಯುವುದು ಬೇಡ. ಮುಖ್ಯಾಧಿಕಾರಿಗಳು ಸಹ ಪ್ರತಿ ವಾರ್ಡ್ಗೆ ತೆರಳಿ ಅಲ್ಲಿರುವ ಮೂಲ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಬೇಕು ಎಂದರು.
ಶಾಸಕ ಜಿ.ಎಸ್.ಪಾಟೀಲ ಮಾತನಾಡಿ ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡುವುದಕ್ಕಿಂತ ಸಾರ್ವಜನಿಕರಿಗೆ ಅನೂಕೂಲವಾಗಬೇಕಾದರೆ ವಾರ್ಡ್ಗಳಲ್ಲಿ ಹೋಗಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ. ಅದಕ್ಕಾಗಿ ತಗಲುವ ಯೋಜನೆಯನ್ನು ಸಿದ್ಧಪಡಿಸಿ ಸರಕಾರದಿಂದ ಮಂಜೂರ ಪಡೆಯೋಣ ಎಂದರು.
ಸಭೆಯಲ್ಲಿ ಪುರಸಭೆಯ ಉಪಾಧ್ಯಕ್ಷೆ ಲಕ್ಷ್ಮೀ ಗಡಗಿ, ಬಾಬುಸಾಬ ಚಿನ್ನೂರ, ತೋಟಪ್ಪ ನವಲಗುಂದ, ಮಂಜುನಾಥ ಹಾಳಕೇರಿ,ಖಾದರಸಾಬ ಸಂಕನೂರ,ಶಿವಪ್ಪ ಕರಲಿಂಗನವರ, ವಿದ್ಯಾ ಬಡಿಗೆರ,ರತ್ನ ಕೊಳ್ಳಿ, ಯಮನವ್ವ ಜಮ್ಮನಕಟ್ಟಿ, ಶಫೀಕ್ ಮುಗನೂರ, ಗುರುಪಾದೇಶ ರಡ್ಡೇರ, ನಾಜಬೇಗಂ ಯಲಿಗಾರ, ಶರಣಪ್ಪ ದೊಡ್ಡಮನಿ,ಗೀತಾ ಕೊಪ್ಪದ, ಜಯಶ್ರೀ ನವಲಗುಂದ, ಶರಣವ್ವ ಜಿಡ್ಡಿಬಾಗಿಲ, ಬಸವರಾಜ ಬಸನಗೌಡ್ರ ಹಾಜರಿದ್ದರು
ಸ್ವಾಮಿ ವಿವೇಕಾನಂದ ಜನ್ಮವರ್ಷಾಚರಣೆ
ಮುಂಡರಗಿ: ಹಿಂದು ಜಾಗರಣಾ ವೇದಿಕೆಯು ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ಗ್ರಾಮ ದೇವತೆ ದೇವಸ್ಥಾನದ ಆವರಣದಲ್ಲಿ ಇದೇ 9ರಂದು ಮಧ್ಯಾಹ್ನ 3ಗಂಟೆಗೆ ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚಾರಣೆ ಹಾಗೂ ಭಾರತ ಮಾತಾ ಪೂಜಾ ಸಮಾರಂಭವನ್ನು ಹಮ್ಮಿಕೊಂಡಿದೆ.
ನರಗುಂದ ಪಂಚಗ್ರಹ ಗುಡ್ಡದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಮೈಸೂರಿನ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ. ಕಲಕೇರಿ–ವಿರುಪಾಪುರದ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.