ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೇಂದ್ರ ಸರ್ಕಾರ ವಾಸ್ತವ ಸ್ಪಷ್ಟಪಡಿಸಲಿ’

Last Updated 18 ಡಿಸೆಂಬರ್ 2013, 5:08 IST
ಅಕ್ಷರ ಗಾತ್ರ

ಶಿರಸಿ: ‘ಅಡಿಕೆ ಬೆಳೆ ನಿಷೇಧ ಕುರಿತಂತೆ ರಾಜಕಾರಣಿಗಳ ದಿನಕ್ಕೊಂದು ಹೇಳಿಕೆಗಳು ನಮಗೆ ಬೇಡ. ವಾಸ್ತವ ಸತ್ಯ ಏನಿದೆ ಎಂಬುದನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಧಿಕೃತವಾಗಿ ಘೋಷಿಸಿ ಅಡಿಕೆ ಬೆಳೆಗಾರರ ಆಂತರಿಕ ದುಗುಡ ನಿವಾರಿಸಲಿ’ ಎಂದು ಅಡಿಕೆ ಬೆಳೆಗಾರರು ಒಕ್ಕೊರಲಿನಿಂದ ಆಗ್ರಹಿಸಿದರು.

ಜೆಡಿಎಸ್‌ ನೇತೃತ್ವದಲ್ಲಿ ಮಂಗಳವಾರ ಇಲ್ಲಿ ನಡೆದ ಪ್ರತಿಭಟನೆಯಲ್ಲಿ ಅಡಿಕೆ ಬೆಳೆಗಾರರು ಪಾಲ್ಗೊಂಡು ರಸ್ತೆ ತಡೆ ನಡೆಸಿ ಅಡಿಕೆ ನಿಷೇಧ ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಮೇಲ್ಮನವಿ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.
ಉಪವಿಭಾಗಾಧಿಕಾರಿ ಕಚೇರಿ ಎದುರು ಸೇರಿದ ಅಡಿಕೆ ಬೆಳೆಗಾರರು ಸಿ.ಪಿ.ಬಜಾರ್‌ ಮೂಲಕ ತೆರಳಿ ಐದು ಕತ್ರಿಯಲ್ಲಿ ರಸ್ತೆ ತಡೆ ನಡೆಸಿದರು.

ಪ್ರತಿಭಟನೆಯ ಮುಖಂಡತ್ವ ವಹಿಸಿದ್ದ ಶಶಿಭೂಷಣ ಹೆಗಡೆ ಮಾತನಾಡಿ, ತಂಬಾಕು ಮತ್ತು ನಿಕೋಟಿನ್‌ಯುಕ್ತ ವಸ್ತುಗಳನ್ನು ಆಹಾರ ಪದಾರ್ಥವಾಗಿ ಬಳಕೆ ಮಾಡಬಾರದೆಂದಿದೆ. ಆದರೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪೂರ್ವಾಗ್ರಹ ಪೀಡಿತ ವರದಿ ಸಿದ್ಧಪಡಿಸಿ ಅಡಿಕೆಯನ್ನು ನಿಷೇಧಿಸುವ ಪ್ರಸ್ತಾವವನ್ನು ಸುಪ್ರೀಂ ಕೋರ್ಟ್‌ ಮುಂದಿಟ್ಟಿದೆ. ತಂಬಾಕು, ನಿಕೋಟಿನ್‌ ಸಹಿತ ವಸ್ತುಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದರೂ ಇವುಗಳ ನಿಷೇಧದ ಪ್ರಸ್ತಾವ ಇಲ್ಲ ಎಂದು ಆರೋಪಿಸಿದರು.

ಖಾತೆ ಸಾಲ, ವೆನಿಲ್ಲಾ ಸಾಲ ಮನ್ನಾ ಆಗಲಿ: ಕೇಂದ್ರ ಸರ್ಕಾರ ಸಂಕಷ್ಟದಲ್ಲಿರುವ ರೈತರ ಸಾಲ ಮುಕ್ತಿಗಾಗಿ 2008–09ರಲ್ಲಿ ಎಎಲ್‌ಡಬ್ಲುಡಿಆರ್‌ಎಸ್‌ (ಕೃಷಿ ಸಾಲ ಮನ್ನಾ ಮತ್ತು ಸಾಲ ಪರಿಹಾರ ಯೋಜನೆ) ಅಡಿಯಲ್ಲಿ ₨ 50ಸಾವಿರ ಕೋಟಿ ಮೀಸಲಿಟ್ಟಿದೆ. ಈ ಹಣದಲ್ಲಿ ಪೂರ್ಣ ಪ್ರಮಾಣದಲ್ಲಿ ಖರ್ಚಾಗಿಲ್ಲವಾಗಿದ್ದು, ರೈತರ ಖಾತೆ ಸಾಲ, ವೆನಿಲ್ಲಾ ಸಾಲವನ್ನು ಈ ಯೋಜನೆ ಅಡಿಯಲ್ಲಿ ಮನ್ನಾ ಮಾಡಬೇಕು. ರೈತರ ಜಮೀನು ಜಪ್ತಿ ಪ್ರಕ್ರಿಯೆ ನಿಲ್ಲಿಸಬೇಕು. ಭತ್ತ ₨ 2ಸಾವಿರ ಕನಿಷ್ಠ ಬೆಂಬಲ ಬೆಲೆ ಘೋಷಿಸಿ ರೈತರಿಂದ ನೇರವಾಗಿ ಭತ್ತ ಖರೀದಿಸುವ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ಜೆಡಿಎಸ್‌ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸುನೀಲ್‌ ಹೆಗಡೆ ಮಾತನಾಡಿ, ‘ಅಡಿಕೆ ಬೆಳೆಗಾರರು ಒಗ್ಗಟ್ಟಾಗಿ ಬಲವಾದ ಚಳವಳಿ ಮಾಡುವ ಪರಿಸ್ಥಿತಿ ಎದುರಾಗಿದೆ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಜೊತೆ ಮಾತುಕತೆ ನಡೆಸಿ ಅಡಿಕೆ ಬೆಳೆಗಾರರ ನಿಯೋಗ ದೊಂದಿಗೆ ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಲು ಪ್ರಯತ್ನಿಸಲಾಗುವುದು’ ಎಂದರು.

‘ಪುರಾಣ ಕಾಲದಿಂದಲೂ ಶಾಂತಿ ಹಾಗೂ ಸಮರದ ಸಂದರ್ಭದಲ್ಲಿ ರಣವೀಳ್ಯ ನೀಡುವಾಗ ಅಡಿಕೆಯನ್ನು ಸೇರಿಸಿ ಕೊಡುವ ಸಂಪ್ರದಾಯವಿದೆ. ಸಂಸ್ಕೃತಿಯ ಭಾಗವಾಗಿರುವ ಅಡಿಕೆಯನ್ನು ಕೇಂದ್ರ ಸರ್ಕಾರ ನಿಷೇಧಿಸುವ ಪ್ರಸ್ತಾಪ ಮಾಡಿದ್ದು ಬೆಳೆಗಾರರ ನಿದ್ದೆಗೆಡಿಸಿದೆ. ಅಡಿಕೆಯನ್ನೇ ನಂಬಿರುವ ಮೂಲ ಅಡಿಕೆ ಬೆಳೆಗಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ. ನಮಗೆ ಸರ್ಕಾರದ ಸಬ್ಸಿಡಿ ಬೇಡ, ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಕೊಡಿ. ನಮ್ಮನ್ನು ನಮ್ಮಷ್ಟಕ್ಕೆ ಬಿಡಿ’ ಎಂದು ಸಾಮಾಜಿಕ ಮುಖಂಡ ಕೆ.ಆರ್‌.ಹೆಗಡೆ ಅಮ್ಮಚ್ಚಿ ಹೇಳಿದರು.

‘ಅಡಿಕೆ ಬೆಳೆಗಾರರ ನಡುವೆ ರಾಜಕೀಯ ಪಕ್ಷಗಳು ಬೇಡ. ಪಕ್ಷಾತೀತ ಹೋರಾಟ ನಡೆಯಲಿ. ಅಡಿಕೆ ಬೆಳೆಗಾರರದೇ ಒಂದು ಪಕ್ಷವಾಗಿ ಹೋರಾಟ ಪ್ರಾರಂಭವಾಗಲಿ’ ಎಂದು ಎನ್‌.ಬಿ.ಹೆಗಡೆ ಹೇಳಿದರು.

ಪ್ರಮುಖರಾದ ಹಾಲಪ್ಪ ಜಕಲಣ್ಣವರ್‌, ಪಿ.ಜಿ.ಭಟ್ಟ ವಡ್ರಮನೆ, ಬಿ.ಆರ್‌.ನಾಯ್ಕ, ವಿ.ವಿ.ಹೆಗಡೆ, ವಿಶ್ವನಾಥ ಶರ್ಮಾ, ಆರ್‌.ಎಂ.ಹೆಗಡೆ, ವಿವೇಕಾನಂದ ವೈದ್ಯ, ಎಂ.ಎಲ್‌.ಹೆಗಡೆ  ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT