ಬೆಂಗಳೂರು: ‘ಮನೆಯಲ್ಲಿ ಕುಳಿತು ರಾಜಕಾರಣಿಗಳನ್ನು ಟೀಕಿಸುವವರು ತಾವೇ ರಾಜಕೀಯ ಪಕ್ಷ ಸ್ಥಾಪಿಸಿ, ಚುನಾವಣೆಯಲ್ಲಿ ಗೆದ್ದು ತಮ್ಮ ಇಚ್ಛೆಯಂತೆ ಬದಲಾವಣೆ ತರುವುದನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಂದ ಕಲಿಯಬೇಕು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದರು.
ಸೋಮವಾರ ಪತ್ರಕರ್ತರ ಜೊತೆ ಮಾತನಾಡಿ, ‘ಕಾನೂನುಗಳನ್ನು ಟೀಕೆ ಮಾಡುವವರು ರಾಜಕೀಯ ಪಕ್ಷ ಸ್ಥಾಪನೆ ಮತ್ತು ಚುನಾವಣೆಗೆ ನಿಂತು ಗೆಲ್ಲುವ ಕಷ್ಟವನ್ನೂ ಅರಿಯಬೇಕಾಗುತ್ತದೆ’ ಎಂದರು.
‘ಹಿಂದೆ ಬೀದಿ ಹೋರಾಟದ ಮೂಲಕ ಕಾನೂನಿನಲ್ಲಿ ಬದಲಾವಣೆ ತರಲು ಮುಂದಾಗಿದ್ದವರಿಗೆ ಕೊನೆಗೂ ಅರಿವಾಗಿದೆ. ಶಾಸನಸಭೆಯ ಮೂಲಕವೇ ಕಾನೂನು ರಚಿಸಬೇಕು ಎಂಬುದು ಅವರಿಗೆ ಗೊತ್ತಾಗಿದೆ. ಅದಕ್ಕಾಗಿ ರಾಜಕೀಯ ಪಕ್ಷ ಸ್ಥಾಪಿಸಿ, ಮುಂದುವರಿಯುವ ಅವರ ನಿರ್ಧಾರ ಸ್ವಾಗತಿಸುತ್ತೇನೆ’ ಎಂದು ಹೇಳಿದರು.
‘ಸಂಪುಟ ಸೇರುವ ಬಯಕೆ ಭಿನ್ನಮತವಲ್ಲ’: ಕಾಂಗ್ರೆಸ್ ನಲ್ಲಿ ಸಚಿವರಾಗುವ ಅರ್ಹತೆಯುಳ್ಳ ಹಿರಿಯ ಶಾಸಕರು ಸಾಕಷ್ಟು ಮಂದಿ ಇದ್ದಾರೆ. ಅವರು ಸಂಪುಟ ಸೇರಲು ಬಯಸಿದರೆ ತಪ್ಪಲ್ಲ. ಅದನ್ನು ಭಿನ್ನಮತ ಎನ್ನಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
‘ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತೆ ಬಿಜೆಪಿಗೆ ಹೋದರೆ ಕಾಂಗ್ರೆಸ್ಗೆ ಇನ್ನೂ ಲಾಭ’ ಎಂದರು.