ಮೂಡಬಿದಿರೆ: ನಿರಂತರ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ದೈಹಿಕ ಕ್ಷಮತೆ, ಮಾನಸಿಕ ಸಮತೋಲನವನ್ನು ಕಾಯ್ದಕೊಳ್ಳಬಹುದು. ಭಾರತದಲ್ಲಿ ಕ್ರಿಕೆಟ್ ಹೊರತುಪಡಿಸಿ ಉಳಿದ ಕ್ರೀಡೆಗಳಿಗೆ ಪ್ರೋತ್ಸಾಹ ಸಿಗದೆ ಅವು ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ. ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸರ್ಕಾರ ನೀಡುವ ಮೀಸಲಾತಿ ಏನೇನೂ ಸಾಲದು ಎಂದು ಜಿಲ್ಲಾ ಪಂಚಾಯತಿ ಸದಸ್ಯ ಈಶ್ವರ್ ಕಟೀಲು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಹಾಗೂ ರೋಟರಿ ಆಂಗ್ಲಮಾಧ್ಯಮ ಆಲೆ ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ರೋಟರಿ ಶಾಲೆಯಲ್ಲಿ ಸೋಮವಾರ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಶಾಲೆಯ ಕಾರ್ಯದರ್ಶಿ ನಾರಾಯಣ ಪಿಎಂ, ಮಕ್ಕಳು ಉತ್ತಮ ಸಾಧನೆ ತೋರಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯಲಿ ಎಂದು ಹಾರೈಸಿದರು.
ಅಂತರಾಷ್ಟ್ರೀಯ ವಾಲಿಬಾಲ್ ಆಟಗಾರ ಪಿ.ಎ ಜೋಸೆಫ್, ಉತ್ತಮ ಜಿಲ್ಲಾ ಶಿಕ್ಷಕಿ ಪ್ರಶಸ್ತಿ ವಿಜೇತ ಪ್ರಾಂತ್ಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ರಾಜಶ್ರೀ ಅವರನ್ನು ಸನ್ಮಾನಿಸಲಾಯಿತು. ತಾಲ್ಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ನಾಗೇಶ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೇಶವ, ಧೀರಜ್, ದೈಹಿಕ ಶಿಕ್ಷಕ ಪ್ರಕಾಶ್ ಹೆಗ್ಡೆ ಮತ್ತಿತರರು ಇದ್ದರು.
ರೋಟರಿ ಪ್ರಾಂಶುಪಾಲ ವಿನ್ಸೆಂಟ್ ಡಿಕೋಸ್ತಾ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ಉಡುಪಿ ನಿರೂಪಿಸಿದರು. ಗಜಾನನ ಉಪಾಧ್ಯಾಯ ವಂದಿಸಿದರು.