ಬೆಂಗಳೂರು: ‘ದೇಶದ ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ವಾರ್ಷಿಕ ಸರಾಸರಿ ಶೇ 15ರಿಂದ ಶೇ 20ರಷ್ಟು ಪ್ರಗತಿ ಕಾಣುತ್ತಿದೆ. ‘ಆರ್ಬಿಐ’ ಬಡ್ಡಿ ದರ ಏರಿಕೆಯು ಉದ್ಯಮದ ಮೇಲೆ ಅಲ್ಪಾ ವಧಿ ಪರಿಣಾಮವನ್ನಷ್ಟೇ ಬೀರಲಿದೆ’ ಎಂದು ಎಂದು ಭಾರತೀಯ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಒಕ್ಕೂಟದ (ಕ್ರೆಡಾಯ್) ಬೆಂಗಳೂರು ಘಟಕದ ಅಧ್ಯಕ್ಷ ಸಿ.ಎನ್ ಗೋವಿಂದ ರಾಜು ಅಭಿಪ್ರಾಯಪಟ್ಟರು.
ಬನ್ನೇರುಘಟ್ಟ ರಸ್ತೆಯಲ್ಲಿರುವ ಕಲ್ಯಾಣಿ ಕಲಾ ಮಂದಿರಲ್ಲಿ ‘ಕ್ರೆಡಾಯ್’ ಆಯೋಜಿಸಿರುವ (ಸೆ. 21 ಮತ್ತು 22 ) ವಸತಿ ಪ್ರದರ್ಶನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
‘ಸುಮಾರು 40ಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಸಂಸ್ಥೆಗಳು ಮತ್ತು 8ಕ್ಕೂ ಹೆಚ್ಚು ಹಣಕಾಸು ಸಂಸ್ಥೆಗಳು ಈ ಪ್ರದರ್ಶನದಲ್ಲಿ ಭಾಗವಹಿಸಿವೆ. ಹಬ್ಬಗಳ ಸಂದರ್ಭದಲ್ಲಿ ಹೊಸ ಮನೆಗಳನ್ನು ಖರೀದಿಸಲು ಯೋಜನೆ ಹೊಂದಿರುವ ಗ್ರಾಹಕರಿಗೆ ಒಂದೇ ಸೂರಿನಡಿ ಎಲ್ಲ ಸೌಲಭ್ಯ ಲಭಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.
‘ಬೆಂಗಳೂರಿನಲ್ಲಿ ರೂ.25ರಿಂದ ರೂ.40 ಲಕ್ಷ ಒಳಗಿನ ಮಧ್ಯಮ ಶ್ರೇಣಿಯ ಮನೆಗಳಿಗೆ ಬೇಡಿಕೆ ಗರಿಷ್ಠ ಮಟ್ಟದಲ್ಲಿದೆ. ಹಣಕಾಸು ಮಾರುಕಟ್ಟೆಯಲ್ಲಿನ ಇತ್ತೀಚಿನ ಅಸ್ಥಿರತೆ ಉದ್ಯಮದ ಮೇಲೆ ಅಷ್ಟೇನೂ ಪರಿಣಾಮ ಬೀರಿಲ್ಲ. ಡಾಲರ್ ವಿರುದ್ಧ ರೂಪಾಯಿ ಅಪಮೌಲ್ಯವೂ ಉದ್ಯಮಕ್ಕೆ ಪೂರಕವಾಗಿದ್ದು, ಇದರಿಂದ ಅನಿವಾಸಿ ಭಾರತೀಯರ (ಎನ್ಆರ್ಐ) ಹೂಡಿಕೆ ಗಣನೀಯವಾಗಿ ಹೆಚ್ಚಿದೆ’ ಎಂದು ‘ಕ್ರೆಡಾಯ್’ ಕಾರ್ಯದರ್ಶಿ ಸುರೇಶ್ ಹರಿ ವಿವರಿಸಿದರು.