ಬದಿಯಡ್ಕ: ‘ದೇವರಿಗೆ ಅರ್ಪಿಸಿದ ಪ್ರತಿಯೊಂದು ವಸ್ತುವೂ ಕೂಡಾ ಪ್ರಸಾದ ರೂಪದಲ್ಲಿ ಭಕ್ತರಿಗೆ ಮರಳಿ ದೊರೆಯುತ್ತದೆ. ಕ್ಷೇತ್ರದಿಂದ ದೊರೆಯುವ ಯಾವುದೇ ವಸ್ತುಗಳಾದರೂ ಕೂಡಾ ಅವುಗಳು ದೇವರ ಪ್ರಸಾದಕ್ಕೆ ಸಮನಾಗಿದೆ. ಕ್ಷೇತ್ರದ ಪ್ರಗತಿಯು ಪ್ರಾದೇಶಿಕ ಭಕ್ತ ಸಮೂಹದ ಶ್ರಮವನ್ನು ಆಧರಿಸಿದೆ’ ಎಂದು ಎಡನೀರು ಕೇಶವಾನಂದ ಸ್ವಾಮೀಜಿ ಹೇಳಿದರು.
ಅವರು ಬದಿಯಡ್ಕ ಸಮೀಪದ ಪೆರಡಾಲದ ಉದನೇಶ್ವರ ಕ್ಷೇತ್ರದಲ್ಲಿ ನಿರ್ಮಿಸಿದ ಶಾಶ್ವತ ಮೇಲ್ಛಾವಣಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಕ್ಷೇತ್ರದ ನೂತನ ಜಾಲತಾಣವನ್ನು ಉದ್ಘಾಟಿಸಲಾಯಿತು.
ಉದ್ಯಮಿ ಸುರೇಶ್ ಕಾಸರಗೋಡು ಉಪಸ್ಥಿತರಿದ್ದರು. ವಕೀಲ ಐ.ವಿ ಭಟ್ ಸ್ವಾಗತಿಸಿದರು. ಕ್ಷೇತ್ರದ ಆಡಳಿತ ಮುಕ್ತೇಸರ ಪಂಜಿತ್ತಡ್ಕ ಟಿ.ಕೆ. ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೆರಡಾಲಗುತ್ತು ಚಂದ್ರಹಾಸ ರೈ ವಂದಿಸಿದರು. ಉದಯಶಂಕರ ಪಟ್ಟಾಜೆ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರಾದ ವೆಂಕಟೇಶ್ವರ ಭಟ್ ಪಟ್ಟಾಜೆ, ಪಿ.ಕೆ ನಾರಾಯಣ ಭಟ್, ರಘುರಾಮ ಆಳ್ವ ಪಳ್ಳತ್ತಡ್ಕ, ಶ್ಯಾಮ್ ಪ್ರಸಾದ ಸರಳಿ, ಪ್ರಸಾದ್ ಮೈರ್ಕಳ ಮೊದಲಾದವರು ಭಾಗವಹಿಸಿದ್ದರು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ತುಲಾಭಾರ ಸೇವೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಕುಮಾರಿ ಹೇಮಶ್ರೀ ಹಾಗೂ ವಾಣಿಶ್ರೀ ಕಾಕುಂಜೆ ಇವರಿಂದ ಶಾಸ್ತ್ರೀಯ ಸಂಗೀತ ನಡೆಯಿತು. ಅಪರಾಹ್ನ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಸದಸ್ಯರಿಂದ ಬಾಯಾರು ಸೂರ್ಯನಾರಾಯಣ ಪದಕಣ್ಣಾಯರ ನಿರ್ದೇಶನದಲ್ಲಿ ‘ಅಂಧಕಾಸುರ ಮೋಕ್ಷ’ ಯಕ್ಷಗಾನ ಪ್ರದರ್ಶನ ನಡೆಯಿತು.