ಹುಬ್ಬಳ್ಳಿ: ಗಡಿನಾಡ ಅಭಿವೃದ್ಧಿಗೆ ಆಗ್ರಹಿಸಿ ಮಹಾರಾಷ್ಟ್ರದ ಜತ್ತದಿಂದ ಬೆಂಗಳೂರಿನವರೆಗೆ ಸೈಕಲ್ ಜಾಥಾ ಹೊರಟಿರುವ ಸುಭಾಷ್ ಬೆಳ್ಳುಬ್ಬಿ ಹಾಗೂ ಗಿರಿಮಲ್ಲ ಮೂಡಳಿ ಸೋಮವಾರ ಹುಬ್ಬಳ್ಳಿಗೆ ಬಂದಿದ್ದರು.
ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸುಭಾಷ್ ಬೆಳ್ಳುಬ್ಬಿ, ’ಗಡಿನಾಡು ಹಾಗೂ ಗಡಿನಾಡ ಕನ್ನಡಿಗರತ್ತ ಸರ್ಕಾರ ಗಮನಕೊಡಬೇಕು ಎಂದು ಆಗ್ರಹಿಸಲು ನಾವು ಸೈಕಲ್ ಜಾಥಾ ಹೊರಟಿದ್ದೇವೆ. ಕಳೆದ ವರ್ಷವೂ ನಾವು ಇದೇ ರೀತಿ ಜತ್ತದಿಂದ ಬೆಂಗಳೂರಿನವರೆಗೆ ಸೈಕಲ್ ಜಾಥಾ ನಡೆಸಿದ್ದೆವು. ಈ ಬಾರಿ 19ನೇ ತಾರೀಖಿನಿಂದ ಜಾಥಾ ಹೊರಟಿದ್ದು, ಇದೇ 25ಕ್ಕೆ ಬೆಂಗಳೂರು ತಲುಪಿ, ಮುಖ್ಯಮಂತ್ರಿಯವರಿಗೆ ಗಡಿನಾಡ ಅಭಿವೃದ್ಧಿ ಕುರಿತಂತೆ ಮನವಿ ಸಲ್ಲಿಸುತ್ತೇವೆ’ ಎಂದರು.
ಸಿಂಧೂರ, ಜಮಖಂಡಿ, ರಾಮದುರ್ಗ, ಹುಬ್ಬಳ್ಳಿ ಮಾರ್ಗದ ಮೂಲಕ ಸೈಕಲ್ ಜಾಥಾ ಹೊರಟಿರುವ ಇವರು, ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ಬೆಂಗಳೂರು ತಲುಪಲಿದ್ದಾರೆ. ‘ಜತ್ತದ ಅಸಂಘಟಿತ ಕನ್ನಡಿಗರಾದ ನಾವು, ಮಾಧ್ಯಮಗಳ ಮೂಲಕ, ಜನಪ್ರತಿನಿಧಿಗಳ ಮೂಲಕ ಎಷ್ಟೇ ಬಾರಿ ಮನವಿ ಸಲ್ಲಿಸಿದರೂ, ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಈ ಮೂಲಕವಾದರೂ ಸರ್ಕಾರದ ನಮ್ಮತ್ತ ಗಮನ ಕೊಡಲಿ ಎಂಬ ಉದ್ದೇಶದಿಂದ ಜಾಥಾ ಹೊರಟಿದ್ದೇವೆ’ ಎಂದು ಅವರು ಹೇಳಿದರು.
‘ಶಿಕ್ಷಣ ಹಾಗೂ ನೌಕರಿಯಲ್ಲಿ ಗಡಿನಾಡ ಕನ್ನಡಿಗರಿಗಾಗಿ ಶೇ 5ರಷ್ಟು ಮೀಸಲಾತಿ ಶೀಘ್ರ ಜಾರಿಯಾಗಬೇಕು, ಮುಖ್ಯಮಂತ್ರಿಗಳು ಗಡಿನಾಡ ಪ್ರದೇಶಗಳಿಗೆ ಭೇಟಿ ಕೊಡಬೇಕು, ಪ್ರಾಧಿಕಾರ, ಅಕಾಡೆಮಿಗಳಿಗೆ ಗಡಿನಾಡ ಕನ್ನಡಿಗರನ್ನು ಸದಸ್ಯರನ್ನಾಗಿ ನೇಮಿಸಬೇಕು, ಗಡಿನಾಡಿನ ಕನ್ನಡ ಶಿಕ್ಷಕರಿಗೆ ತರಬೇತಿ ಹಾಗೂ ಕೈಪಿಡಿಗಳು ಕನ್ನಡ ಭಾಷೆಯಲ್ಲಿಯೇ ದೊರಕುವಂತಾಗಬೇಕು, ಕರ್ನಾಟಕದಲ್ಲಿ ಆಯೋಜಿತ ಎಲ್ಲ ಉಚಿತ ತರಬೇತಿಗಳಿಗೆ ಗಡಿನಾಡ ಕನ್ನಡಿಗರಿಗೂ ಪ್ರವೇಶ ಸಿಗುವಂತಾಗಬೇಕು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಾಥಾ ಹೊರಟಿದ್ದೇವೆ’ ಎಂದು ಸುಭಾಷ್ ಹೇಳಿದರು.