ವಿಜಾಪುರ: ‘ಗಾಯತ್ರಿ ಮಂತ್ರ ಪಠಣದಿಂದ ಜ್ಞಾನವೃದ್ಧಿ ಯಾಗುತ್ತದೆ. ದೇಶದಲ್ಲಿ ಗಾಯತ್ರಿ ಜಪಮಾಡುವವರ ಸಂಖ್ಯೆ 10 ಕೋಟಿಗೆ ತಲುಪಿದೆ’ ಎಂದು ತಡಸ ಗಾಯತ್ರಿ ತಪೋಭೂಮಿಯ ಬಾಲಕೃಷ್ಣಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಹೊರ ವಲಯದಲ್ಲಿರುವ ರುಕ್ಮಾಂಗದ ಪಂಡಿತರ ಸಮಾಧಿ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಗಾಯತ್ರಿ ಜಪ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
‘ವೇದ ಮಾತೆ-, ದೇವ ಮಾತೆ ಎಂದೇ ಕರೆಯಲ್ಪಡುವ ಗಾಯತ್ರಿ ಮಾತೆಯನ್ನು ಸ್ತುತಿಸಿದವರಿಲ್ಲ. ದೇವಾನು ದೇವತೆಗಳು– ಋಷಿ-ಮುನಿಗಳು ಸೇರಿದಂತೆ ಹಲವರು ಗಾಯತ್ರಿ ಮಂತ್ರ ಪಠಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಸಿಕೊಂಡ ಉದಾಹರಣೆಗಳಿವೆ. ಹಾಗೆಂದ ಮಾತ್ರಕ್ಕೆ ಉಳಿದ ಮಂತ್ರಗಳ ಶಕ್ತಿಯೇನು ಕಡಿಮೆ ಇಲ್ಲ’ ಎಂದರು.
‘ಫೆಬ್ರುವರಿ ತಿಂಗಳು ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕು ರಾಮತೀರ್ಥ(ಕಕಮರಿ)ಯಲ್ಲಿ 22ನೇ ಗಾಯತ್ರಿ ಕೋಟಿ ಜಪ ಯಜ್ಞ ಕಾರ್ಯಕ್ರಮ ಜರುಗಲಿದೆ. ಭಕ್ತರು ಪಾಲ್ಗೊಳ್ಳಬೇಕು’ ಎಂದು ಕೋರಿದರು.
ರಾಜು ಪದಕಿ, ಪ್ರಕಾಶ ಕುಲಕರ್ಣಿ ಮಾತನಾಡಿದರು. ನಂತರ ನಡೆದ ಶೋಭಾಯಾತ್ರೆಯಲ್ಲಿ ಭಜನಾ ಮಂಡಳಿಯವರು, ಮಹಿಳೆಯರು ಕೋಲಾಟ ಆಡುತ್ತ ಪಾಲ್ಗೊಂಡು ಗಮನ ಸೆಳೆದರು. ಮಹಿಳೆಯರಿಂದ ಗಾಯತ್ರಿ ದೇವಿಗೆ ಕುಂಕುಮಾರ್ಚನೆ ಜರುಗಿತು. ಪಂಡಿತ ವಿಷ್ಣುಪಂತ ಉಪಾಧ್ಯೆ ನೇತೃತ್ವ ವಹಿಸಿದ್ದರು.
ಚಿಂತಕ ಡಾ.ಗುರುರಾಜ ಕರ್ಜಗಿ ಉಪನ್ಯಾಸ ನೀಡಿದರು. ಆಕಾಶವಾಣಿ ಕಲಾವಿದ ಪಂ. ವೆಂಕಟೇಶಕುಮಾರ ಅವರ ದಾಸವಾಣಿ ಕಾರ್ಯಕ್ರಮ ಜರುಗಿತು.