ರಾಣೆಬೆನ್ನೂರು: ‘ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಗರದ ಅಭಿವೃದ್ಧಿಗೆ ಸರ್ವ ಸದಸ್ಯರು ಸದಸ್ಯರು ಪಕ್ಷ ಬೇಧ ಮರೆತು ನಗರದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಶಾಸಕ ಕೆ.ಬಿ.ಕೋಳಿವಾಡ ಹೇಳಿದರು.
ಇಲ್ಲಿನ ಅಶೋಕ ವೃತ್ತದಲ್ಲಿ ಸೋಮವಾರ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ ಸಣ್ಣ, ಅತೀ ಸಣ್ಣ ಮತ್ತು ದೊಡ್ಡ ನಗರಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಅಡಿಯಲ್ಲಿ ನಗರಕ್ಕೆ ಬಿಡುಗಡೆಯಾದ ರೂ. 15 ಕೋಟಿ ಅನುದಾನದಲ್ಲಿ ನಗರಸಭೆಯ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ರೂ.12 ಕೋಟಿ ಕಾಂಕ್ರಿಟ್ ರಸ್ತೆ ಡಾಂಬರೀಕರಣ ಕಾಮಗಾರಿಗೆ ಮತ್ತು ರೂ. 3 ಕೋಟಿ ಅನುದಾನ ಒಳಚರಂಡಿ ಕಾಮಗಾರಿಗೆ ಬಿಡುಗಡೆಯಾಗಿದೆ. ನೂತನ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ನಗರಕ್ಕೆ ರೂ. 35 ಕೋಟಿ ಅನುದಾನ ಮಂಜೂರಾಗಿದೆ’ ಎಂದರು.
‘ನಗರದ ದೊಡ್ಡಕರೆಗೆ ರೂ. 20 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು. ಅಲ್ಲದೆ ನಗರದ ವಿವಿಧ ವಾರ್ಡ್ ಗಳಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸಿದರು.
‘ಕೊಳಚೆ ಪ್ರದೇಶದ ಜನರು ನೆಮ್ಮದಿಯಿಂದ ಬದುಕಬೇಕು. ಚುನಾವಣೆ ಸಮಯದಲ್ಲಿ ನೀಡಿದ್ದ ಭರವಸೆಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದು ಶಾಸಕ ಕೋಳಿವಾಡ ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷ ಪಾರ್ವತೇಮ್ಮ ಹಲ್ಡೀಲ್ಡರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಿವಪ್ಪ ಮಣೇಗಾರ, ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ರಾಘವೇಂದ್ರ ಚಿನ್ನಿಕಟ್ಟಿ, ಬಸವರಾಜ ಹುಚಗೊಂಡರ, ವೀರಣ್ಣ ಮಾಕ-ನೂರು, ಶಶಿಧರ ಬಸೆನಾಯಕ ಮತ್ತು ಪ್ರಕಾಶ ಜೈನ, ಕೆ.ಡಿ.ಸಾವುಕಾರ ಉಪಸ್ಥಿತರಿದ್ದರು. ನಗರಸಭೆ ಎಂಜಿನಿಯರ್ ಬಿ.ಎಸ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಜಿ.ಕಾಟಿ ರಮ ನಿರೂಪಿಸಿದರು. ನಂದೆಪ್ಪ ವಂದಿಸಿದರು.