ಕುಕನೂರು: ಯಾವುದೇ ವ್ಯಕ್ತಿ ಹುಟ್ಟಿ ನಿಂದಲೇ ಪ್ರತಿಭಾವಂತ ಆಗಿರುವುದಿಲ್ಲ. ಗ್ರಾಮೀಣ ಪ್ರದೇಶ ಅಥವಾ ಕನ್ನಡ ಮಾಧ್ಯಮ ಎಂಬ ಕೀಳರಿಮೆಯನ್ನು ವಿದ್ಯಾರ್ಥಿಗಳು ತೊಡೆದು ಹಾಕಬೇಕು ಎಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ವಿ.ತಳವಾರ ಹೇಳಿದರು.
ಇಲ್ಲಿನ ಡಾ.ಜಿ.ಎಸ್.ಮೇಲ್ಕೋಟೆ ಗ್ರಾಮೀಣ ಪಾಲಿಟೆಕ್ನಿಕ್ನಲ್ಲಿ ಸೋಮ ವಾರ ಏರ್ಪಡಿಸಿದ್ದ ಎಂಜಿನಿಯರ್ ದಿನಾಚರಣೆ, ನವೀಕೃತಗೊಂಡಿರುವ ವಿವಿಧ ಕೋರ್ಸುಗಳ ಪ್ರಯೋಗಾಲಯ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿ ಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ತಾಂತ್ರಿಕ ಶಿಕ್ಷಣ ಇಲಾಖೆ ಅಡಿಯಲ್ಲಿ 81 ಸರ್ಕಾರಿ, 43 ಅನುದಾನಿತ ಹಾಗೂ 163 ಅನುದಾನ ರಹಿತ ಪಾಲಿಟೆಕ್ನಿಕ್ ಸೇರಿದಂತೆ ಒಟ್ಟು 291 ಡಿಪ್ಲೊಮಾ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಬೋಧನೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ.
ಕಲಿಕೆಯಲ್ಲಿ ಹಿಂದೆ ಬೀಳುತ್ತೇವೆ ಎಂಬ ಅರಿವಿದ್ದರೂ ಕೂಡ ವಿದ್ಯಾರ್ಥಿಗಳು ಕ್ಯಾರಿ ಓವರ್ ಪದ್ಧತಿ ಜಾರಿಗೆ ಒತ್ತಾಯಿ ಸುವುದು ಸರಿಯಲ್ಲ. ವಿದ್ಯಾರ್ಥಿ ಸಂಘಟನೆಗಳು ಈ ಬೇಡಿಕೆಗೆ ಬೆಂಬಲ ನೀಡದೇ ಮೌಲ್ಯಯುತ ಶಿಕ್ಷಣ ಪಡೆಯಲು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಪ್ರಾಚಾರ್ಯ ಎನ್.ಆರ್.ಕುಕ ನೂರು ಪ್ರಾಸ್ತಾವಿಕವಾಗಿ ಮಾತನಾಡಿ, 29 ವರ್ಷಗಳಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ವನ್ನು ನೀಡಿದ್ದರ ಫಲವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೊರಹೊಮ್ಮಿದ್ದಾರೆ. ಜತೆಗೆ ಇಂದಿನ ದಿನಮಾನಕ್ಕೆ ಅನುಗುಣ ವಾಗಿ ಶಿಕ್ಷಣದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ ಎಂದರು.
ಜಂಟಿ ನಿರ್ದೇಶಕ ಎ.ಎಂ.ಭೋಜೆ ದಾರ, ಗಜೇಂದ್ರಗಡ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಟಿ.ಭೈರಪ್ಪನವರ, ವಿದ್ಯಾನಂದ ಗುರುಕುಲ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶರಣಪ್ಪ ಹೊಸಮನಿ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಪಿ.ಮುರಡಿ ಮಾತನಾಡಿದರು.
ರವಿಕುಮಾರ ಸರಮೊಕದ್ದಂ ಅಧ್ಯಕ್ಷತೆ ವಹಿಸಿದ್ದರು. ಜಿ.ವಿ.ಜಹಗೀರದಾರ, ಡಿ.ಆರ್.ಕುಲಕರ್ಣಿ, ಎಸ್.ಎಲ್. ಲಮಾಣಿ ಉಪಸ್ಥಿತರಿದ್ದರು.
ಶೇಖ್ಮೆಹಬೂಬ ಸ್ವಾಗತಿಸಿದರು. ಕೆ.ಆರ್.ಕುಲಕರ್ಣಿ ನಿರೂಪಿಸಿ, ಮಂಜುನಾಥ ಹಮ್ಮಿಗಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.