ಬೆಂಗಳೂರು: ‘ಸಂಶೋಧಕ ಚಿದಾನಂದ ಮೂರ್ತಿ ಅವರು ಕನ್ನಡ ಮತ್ತು ಕನ್ನಡಿಗರ ಕುರಿತು ಇರುವ ಜಂಗಮ ವಿಶ್ವಕೋಶವಾಗಿದ್ದಾರೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಸಿದ್ದಲಿಂಗಯ್ಯ ಹೇಳಿದರು.
ಕನ್ನಡ ಗೆಳೆಯರ ಬಳಗವು ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಎಂ.ಚಿದಾನಂದ ಮೂರ್ತಿ ಅವರ ‘ಕರ್ನಾಟಕದ ಅಂದಿನ ಶ್ರೇಷ್ಠರ ಇಂದಿನ ವಂಶಸ್ಥರು’ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಇದೊಂದು ಕುತೂಹಲಕಾರಿ ಕೃತಿಯಾಗಿದೆ. ಈ ಕೃತಿಯ ಓದಿನಿಂದ ಹಿಂದಿನ ಕವಿ, ಅರಸರು ಹೃದಯಕ್ಕೆ ಹತ್ತಿರವಾಗುತ್ತಾರೆ ಎಂಬ ಮಾತು ಉತ್ರೇಕ್ಷೆಯಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ಚಿದಾನಂದ ಮೂರ್ತಿ ಅವರು ಮೈಸೂರಿನಿಂದ ನೇಪಾಳದವರೆಗೆ ಪಯಣಿಸಿ ಎಲ್ಲ ಮಾಹಿತಿಯನ್ನು ಒದಗಿಸಿದ್ದಾರೆ. ಕೃತಿ 10ನೇ ಶತಮಾನದ ಇತಿಹಾಸಕ್ಕೆ ಹಿಡಿದ ಕನ್ನಡಿಯಾಗಿದೆ’ ಎಂದರು.
ಕನ್ನಡ ಗೆಳೆಯರ ಬಳಗದ ಅಧ್ಯಕ್ಷ ರಾ.ನಂ.ಚಂದ್ರಶೇಖರ ಮಾತನಾಡಿ. ‘ ತಿರುವಳ್ಳುವರ್, ತೆಲುಗು ಅವರಿಗೆ ವೇಮನ, ಮರಾಠರಿಗೆ ಶಿವಾಜಿ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಆದರೆ, ಕನ್ನಡಕ್ಕೆ ಇದುವರೆಗೂ ಅಂತಹ ಸಾಂಸ್ಕೃತಿಕ ನಾಯಕರೇ ಇಲ್ಲದಂತಾಗಿದೆ’ ಎಂದು ವಿಷಾದಿಸಿದರು. ‘ಕನ್ನಡಕ್ಕೆ ಬಸವಣ್ಣ ಸಾಂಸ್ಕೃತಿಕ ನಾಯಕನಾಗಲು ಸೂಕ್ತರಾಗಿದ್ದಾರೆ. ಆದರೆ, ಅವರನ್ನು ನಿರ್ಲಕ್ಷಿಸಲಾಗುತ್ತಿದೆ’ ಎಂದರು.
ಸಂಶೋಧಕ ಚಿದಾನಂದ ಮೂರ್ತಿ ಮಾತನಾಡಿ, ‘ಪಂಪ ರನ್ನರಂತಹ ಮಹಾನ್ ಕವಿಗಳಿಂದ ಕನ್ನಡವು ಇಂದು ಶಾಸ್ತ್ರೀಯ ಭಾಷೆಯಾಗಿದೆ. ಕನ್ನಡ ಭಾಷೆಯನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಹೇಳಿದರು.
‘
ವರ್ಡ್ಸ್ವರ್ತ್ ಮನೆಗೆ ಹೋದಾಗ ನನಗೆ ಈ ಸಂಶೋಧನೆ ಕೈಗೊಳ್ಳಲು ಪ್ರೇರಣೆ ದೊರೆಯಿತು. ಮುಂದೆ ಶ್ರೀಲಂಕಾದಲ್ಲಿ ಕ್ಷೇತ್ರ ಕಾರ್ಯವನ್ನು ಕೈಗೊಂಡು ಸಂಶೋಧನಾ ಕೃತಿಯನ್ನು ಹೊರತರುವ ಆಶಯವಿದೆ’ ಎಂದರು.