ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಸೇವೆಗೆ ರಾಜಕೀಯ ಸೇರಿಕೊಳ್ಳಿ’

ಅಣಕು ಸಂಸತ್‌ನಲ್ಲಿ ಯುವಕರಿಗೆ ನಿಸ್ಸೀಮಗೌಡರ ಸಲಹೆ
Last Updated 9 ಜನವರಿ 2014, 6:32 IST
ಅಕ್ಷರ ಗಾತ್ರ

ಹಾವೇರಿ: ರಾಜಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಗೆ ಅಪಾರ ಅವಕಾಶವಿದ್ದು, ಯುವ ಜನರು ಜನಸೇವೆಗಾಗಿ ರಾಜಕೀಯ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ನಿಸ್ಸೀಮಗೌಡರ ಸಲಹೆ ಮಾಡಿದರು.

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳ ಆಶ್ರಯದಲ್ಲಿ ಮಂಗಳವಾರ ಜಿ.ಪಂ. ಸಭಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರಿಗೂ ಶಿಕ್ಷಣ ಅತ್ಯವಶ್ಯಕವಾಗಿದೆ. ವಿದ್ಯಾರ್ಥಿ ದಿಸೆಯಲ್ಲಿ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದ ಕುರಿತು ಪರಿಚಯಿಸುವುದರ ಜತೆಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವಲ್ಲಿ ಇಂಥ ಅಣುಕು ಪ್ರದರ್ಶನಗಳನ್ನು ಹೆಚ್ಚೆಚ್ಚು ಏರ್ಪಡಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ ಮಾತನಾಡಿ, ಇಂದಿನ ಯುವಜನರು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ  ಕಾರ್ಯ ನಿರ್ವಹಣೆ, ಶಾಸನಗಳು ಹಾಗೂ ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಉತ್ತಮ ಪ್ರಜೆಗಳಾಗಬೇಕೆಂದು ಹೇಳಿದರು.

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯ ಉಪಕಾರ್ಯದರ್ಶಿ ಆರ್.ಅಂಜನಿ ಪ್ರಾಸ್ತಾವಿಕವಾಗಿ ಮಾತನಾಡಿ, ಯುವ ಜನರಲ್ಲಿ  ನಮ್ಮ ಸಂಸದೀಯ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸಿ ಅವರ ಭಾಗವಹಿಸುವಿಕೆಯನ್ನು ಉತ್ತಮ ಪಡಿಸಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ಹಣಕಾಸಿನ ನೆರವು ನೀಡುತ್ತಿವೆ ಎಂದು ತಿಳಿಸಿದರು.

ಸರ್ಕಾರದ ನೆರವಿನಿಂದ ರಾಜ್ಯದ ೩೪ ಶೈಕ್ಷಣಿಕ ಜಿಲ್ಲೆಗಳಲ್ಲಿ ಪ್ರತಿ ವರ್ಷ ಪ್ರೌಢಶಾಲಾ ಮಕ್ಕಳಿಗೆ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಒಂದು ದಿನದ ಯುವ ಸಂಸತ್ ಸ್ಪರ್ಧೆಯನ್ನು ಏರ್ಪಡಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಬಹುಮಾನ ನೀಡಲಾಗುತ್ತದೆ ಎಂದರು.

ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ. ಆಂಜನಪ್ಪ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ಮುದ್ದಪ್ಪನವರ, ಹಿರೇಕೆರೂರು, ಜಿ.ಪಂ. ಸದಸ್ಯರಾದ ಸುಜಾತಾ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ.ಕೊಡ್ಲಿ ಅವರು ಸ್ವಾಗತಿಸಿದರು.

ಗಮನ ಸೆಳೆದ ಅಣುಕು ಸ್ಪರ್ಧೆ: ವಿದ್ಯಾರ್ಥಿಗಳ ಅಣುಕು ಸಂಸತ್‌ನಲ್ಲಿ ರಾಜ್ಯ ವಿಧಾನಸಭಾ ಅಧಿವೇಶನ ನೆನಪಿಸುವಂತಿತ್ತು.
ವಿಧಾನ ಸಭಾಧ್ಯಕ್ಷರು ಸಾಂಪ್ರಾದಾಯಿಕ ಪ್ರವೇಶ ದೊಂದಿಗೆ ಆರಂಭಗೊಂಡ ವಿಧಾನಸಭಾ ಕಲಾಪದಲ್ಲಿ ಮೊದಲು ಅಗಲಿದ ಗಣ್ಯರಿಗೆ ಸಂತಾಪ, ನಂತರ ಪ್ರಶ್ನೋತ್ತರ ಹೀಗೆ ದಿನದ ಕಲಾಪ ತೆರೆದುಕೊಂಡಿತು.

ನಂತರ ನಡೆದ ಕಲಾಪದಲ್ಲಿ ಆಡಳಿತ ಪಕ್ಷದ ನಿರ್ವಹಣೆ ಮಾಡಿದ ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳನ್ನು ಸಮರ್ಥಿಸಿಕೊಳ್ಳುವುದರ ಜತೆಗೆ ವಿರೋಧ ಪಕ್ಷದ ಟೀಕೆಗಳಿಗೆ ಸಮರ್ಪಕ ಉತ್ತರ ನೀಡಿದರು. ವಿರೋಧ ಪಕ್ಷ ನಿರ್ವಹಣೆ ಮಾಡಿದ ವಿದ್ಯಾರ್ಥಿಗಳು ಆಡಳಿತರೂಢ ಪಕ್ಷ ಕಾರ್ಯಗತಗೊಳಿಸಿದ ಅನ್ನಭಾಗ್ಯ, ಕ್ಷೀರಭಾಗ್ಯದಂತಹ ಅಗ್ಗದ ಪ್ರಚಾರದ ಯೋಜನೆಗಳನ್ನು ಗೇಲಿ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡು ಗಮನ ಸೆಳೆದರು.

ಜಿಲ್ಲೆಯ ಏಳೂ ತಾಲ್ಲೂಕುಗಳಿಂದ ಆಗಮಿಸಿದ ೭೦ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಈ ಅಣುಕು ಶಾಸನ ಸಭೆಯಲ್ಲಿ ಪಾಲ್ಗೊಂಡು, ಪ್ರಜಾಪ್ರಭುತ್ವದ ಶಾಸನ ಸಭೆಗಳ ಕಾರ್ಯನಿರ್ವಹಣೆಗೆ ಹೇಗಿರುತ್ತದೆ ಎಂಬುದನ್ನು ಬಿಂಬಿಸುವಲ್ಲಿ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT