ಬೆಂಗಳೂರು: ‘ಅಧಿಕಾರದಲ್ಲಿರುವ ಜನಪ್ರತಿನಿಧಿಗಳಿಗೆ ಜವಾಬ್ದಾರಿಗಳಿಲ್ಲ. ವಿದೇಶಿ ಪ್ರವಾಸಕ್ಕೆ ಹೋಗಲು ಹಣವಿರುತ್ತದೆ. ಆದರೆ, ಜನರ ಸಮಸ್ಯೆ ಬಗೆಹರಿಸಲು ಹಣವಿರುವುದಿಲ್ಲ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ಅವರು ಖಾರವಾಗಿ ಹೇಳಿದರು.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಪಿಂಚಣಿದಾರರ ದಿನಾಚರಣೆ ಹಾಗೂ 80 ವರ್ಷ ಮೇಲಿನ ಹಿರಿಯ ನಿವೃತ್ತ ನೌಕರರ ಸನ್ಮಾನ ಸಮಾರಂಭ’ದಲ್ಲಿ ಅವರು ಮಾತನಾಡಿದರು.
‘ರಾಜಕೀಯ ವ್ಯಕ್ತಿಗಳಿಗೆ ಸಾರ್ವಜನಿಕರ ಹಣವನ್ನು ಪೋಲು ಮಾಡುವುದು ಮಾತ್ರ ತಿಳಿದಿದೆ. 1950 ರಲ್ಲಿ ಕೇವಲ ಒಂದು ಹಗರಣ ಜೀಪ್ ಹಗರಣವೆಂದು ಬೆಳಕಿಗೆ ಬಂದಿತ್ತು. ಆದರೆ, ಇಂದು ನೂರಾರು ಹಗರಣಗಳು ಪ್ರತಿನಿತ್ಯ ನಡೆಯುತ್ತಿವೆ’ ಎಂದು ವಿಷಾದಿಸಿದರು.
‘ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರು ನಿವೃತ್ತಿಯ ನಂತರವಾದರೂ ಸಾಮಾಜಿಕ ಕಾಳಜಿಯನ್ನು ಬೆಳೆಸಿಕೊಂಡು ಬೀದಿಗೆ ಬಂದು ಜನರ ಸಮಸ್ಯೆಗಳ ಕುರಿತು ಚರ್ಚೆ ಮಾಡುವ ಅಗತ್ಯವಿದೆ’ ಎಂದರು.
ಜಯದೇವ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಮಾತನಾಡಿ, ‘ಇಂದಿನ ಜೀವನಶೈಲಿಯಿಂದ ಮಾನಸಿಕ ಒತ್ತಡಗಳು ಹೆಚ್ಚಾಗಿವೆ. ಮೊದಲಿದ್ದ ಅವಿಭಕ್ತ ಕುಟುಂಬಗಳು ಹೋಗಿ ಇಂದು ವಿಭಕ್ತ ಕುಟುಂಬಗಳಾಗಿ, ತಂದೆ–ತಾಯಿ ಮತ್ತು ಮಕ್ಕಳ ಸಂಬಂಧಗಳು ಕುಸಿಯುತ್ತಿವೆ’ ಎಂದರು.
‘ಇಂದು ದೊಡ್ಡಮನೆಯಲ್ಲಿ ಕಡಿಮೆ ಜನರ ವಾಸ, ಹೆಚ್ಚೆಚ್ಚು ಪದವಿಗಳನ್ನು ಪಡೆದಷ್ಟು ಸಾಮಾನ್ಯ ಜ್ಞಾನ ಕಡಿಮೆಯಾಗಿದೆ. ಇಂದು ರೋಗಗಳ ಸಂಖ್ಯೆ ಹೆಚ್ಚುತ್ತಿವೆ. ಇಂದು ಜೀವನ ಮೌಲ್ಯಗಳು, ಬಾಂಧವ್ಯಗಳು ಕುಸಿಯುತ್ತಿವೆ’ ಎಂದು ವಿಷಾದಿಸಿದರು.
ಪ್ರತಿಯೊಂದರ ಲೆಕ್ಕ ಕೇಳಬೇಕು
ಬಿಬಿಎಂಪಿಯಲ್ಲಿ ಹಣವಿಲ್ಲವೆಂದು ಸಾರ್ವ ಜನಿಕ ಆಸ್ತಿಗಳನ್ನು ಅಡವು ಇಡುವ ಹಕ್ಕು ಅವರಿಗೆ ನೀಡಿದವರಾರು? ಬೊಕ್ಕಸದಲ್ಲಿ ಎಷ್ಟು ಹಣವಿದೆ, ಎಷ್ಟು ಖರ್ಚು ಮಾಡಬೇಕೆಂಬುದು ಬಜೆಟ್ ಮಂಡಿಸುವಾಗಲೇ ತಿಳಿದಿರಬೇಕು. ಆದರೆ, ಮನಸ್ಸಿಗೆ ಬಂದಂತೆ ಖರ್ಚು ಮಾಡಿ, ಈಗ ಸಾರ್ವಜನಿಕರ ಆಸ್ತಿಯನ್ನು ಅಡವು ಇಡುವುದು ಎಷ್ಟು ಸರಿ? ಜನರು ಪ್ರತಿಭಟಿಸಬೇಕು. ಪ್ರತಿಯೊಂದರ ಲೆಕ್ಕವನ್ನು ಕೇಳಬೇಕು.
– ಎನ್.ಸಂತೋಷ ಹೆಗ್ಡೆ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.