ವಿಜಾಪುರ: ‘ಉತ್ತರ ಕರ್ನಾಟಕದ ಜನರು ಜಾನಪದಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಸಮಾಜ ಸಾಕಷ್ಟು ಬದಲಾವಣೆಯಾದರೂ ಜನಪದ ತಮ್ಮ ಮೌಲ್ಯ ಕಳೆದುಕೊಂಡಿಲ್ಲ’ ಎಂದು ಗುಲ್ಬರ್ಗದ ತಿಂಥಣಿಯ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಹೇಳಿದರು.
ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಹಾಗೂ ಫೆಡಿನಾ ಸಂಸ್ಥೆಯ ಸಹಯೋಗದಲ್ಲಿ ಗುರುವಾರ ಸಂಜೆ ಇಲ್ಲಿಯ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ಜನಪದ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬುರಣಾಪೂರ ಸಿದ್ಧಾರೂಢ ಆಶ್ರಮದ ಯೋಗೇಶ್ವರಿ, ಗೀಗೀ ಪದ, ಹಂತಿಪದ, ಚೌಡಕಿ, ಬೀಸುವ ಕಲ್ಲು, ಭಜನೆ ಮುಂತಾದವುಗಳಿಂದ ಜನ ಶತ ಶತಮಾನಗಳಿಂದ ಮನರಂಜನೆ ಪಡೆಯುತ್ತಿದ್ದಾರೆ. ಜನಪದ ನಮಗೆಲ್ಲರಿಗೂ ಅತ್ಯಅವಶ್ಯ ಎಂದರು.
ಬಿಎಲ್ಡಿಇ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಹಾಂತೇಶ ಬಿರಾದಾರ, ನಾವೆಲ್ಲರೂ ಜನಪದ ಪರಂಪರೆಯಲ್ಲಿಯೇ ಬೆಳೆದು ಬಂದವರು. ಜಾನಪದವು ಸುಂದರ ಸಮಾಜದ ರಚನೆಗೆ ಬುನಾದಿಯಾಗಿದೆ ಎಂದು ಹೇಳಿದರು. ಡಾ. ಸೋಮಶೇಖರ ವಾಲಿ, ಮಹಾದೇವ ರೆಬಿನಾಳ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ನಾಗಠಾಣ ಶಾಸಕ ರಾಜು ಅಲಗೂರ, ಜನಪದ ಕಲೆ ಅತ್ಯಂತ ಶ್ರೀಮಂತವಾದದ್ದು. ಅದು ಎಂದೂ ನಶಿಸುವುದಿಲ್ಲ. ರೈತಾಪಿ ಕುಟುಂಬಗಳ ಮನರಂಜನೆಯ ಜೀವ ನಾಡಿಯಾಗಿರುವ ಜನಪದ ಕ್ಷೇತ್ರದ ವಿಸ್ತಾರ ದೊಡ್ಡದು ಎಂದು ಹೇಳಿದರು.
ಜಾವೀದ್ ಜಮಾದಾರ, ಡಾ.ಗಂಗಾಧರ ಸಂಬಣ್ಣಿ, ಸುರೇಶ ಗೊಣಸಗಿ, ಪ್ರಭುಗೌಡ ಪಾಟೀಲ, ಶ್ರೀನಿವಾಸ ಗುರ್ಜಾಲ್, ಯಾಕೂಬ್ ಜತ್ತಿ, ಡಾ.ರಮೇಶ ಸೋನಕಾಂಬಳೆ ವೇದಿಕೆಯಲ್ಲಿದ್ದರು. ಮಹಾಲಕ್ಷ್ಮಿ ದೇವಸ್ಥಾನದ ಅಧ್ಯಕ್ಷ ಅಶೋಕ ಬಗಲಿ ಅವರನ್ನು ಸನ್ಮಾನಿಸಲಾಯಿತು.