ಧಾರವಾಡ: ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಸಿಕ್ಕಿಕೊಂಡಿರುವ ಹುಬ್ಬಳ್ಳಿ ದೇಶಪಾಂಡೆ ನಗರದ ಮೈದಾನವನ್ನು ಸರ್ಕಾರ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಗ್ರೌಂಡ್ ಬಚಾವೊ ಆಂದೋಲನದ ಗೌರವಾಧ್ಯಕ್ಷ, ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಎಚ್ಚರಿಸಿದ್ದಾರೆ.
‘ಮೊಘಲ್ ದೊರೆ ಜಹಾಂಗಿರನ ಅರಮನೆಯ ಮುಂದೆ ಒಂದು ಗಂಟೆ ಇರುತ್ತಿತ್ತು. ಅನ್ಯಾಯಕ್ಕೆ ಒಳಗಾದವರು ಯಾರೇ ಇದ್ದರೂ ಅವರು ಯಾವುದೇ ಹೊತ್ತಿನಲ್ಲಿ ಆ ಗಂಟೆಯನ್ನು ಬಾರಿಸಿದರೆ ದೊರೆ ಅವರನ್ನು ತನ್ನ ಬಳಿಗೆ ಬರಮಾಡಿಕೊಂಡು ಅವರ ಅಳಲನ್ನು ಕೇಳಿ ಅವರಿಗೆ ನ್ಯಾಯ ಒದಗಿಸಿಕೊಡುತ್ತಿದ್ದ. ಈಗ ದೇಶಪಾಂಡೆ ನಗರದಲ್ಲಿ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಮೈದಾನವನ್ನು ಕ್ಲಬ್ ಹೆಸರಿನಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು, ಸರ್ಕಾರ ವಿಧಿಸಿದ ಹಲವು ಕರಾರುಗಳನ್ನು ಮುರಿದು ಅಲ್ಲಿ ಕ್ರೀಡೆಗಳು ನಡೆಯದಂತೆ ಮಾಡಿದ್ದಾರೆ, ಅಲ್ಲಿ ಹೆಂಗಸರು ಹಾಗೂ ಹಿರಿಯ ನಾಗರಿಕರು ವಾಯುವಿಹಾರ ಮಾಡದಂತಹ ಪರಿಸ್ಥಿತಿಯನ್ನು ನಿರ್ಮಿಸಿ ಮಕ್ಕಳು–ಮರಿಗಳು ಅಲ್ಲಿ ಆಡದಂತೆ ಮಾಡಿದ್ದಾರೆ. ಆ ಸ್ಥಳದಲ್ಲಿ ಶ್ರೀಮಂತರು ಕುಡಿಯುವುದಕ್ಕೋಸ್ಕರ ಗಡಂಗವನ್ನು (ಬಾರ್) ನಿರ್ಮಿಸಿದ್ದಾರೆ. ಜೂಜಾಟ ಮಾಡುವ ಜನರಿಗೆ ಅಲ್ಲಿ ಇಸ್ಪೀಟ್ ಅಡ್ಡೆಯನ್ನು ಕಟ್ಟಿಸಿದ್ದಾರೆ. ಶ್ರೀಮಂತರಿಗೋಸುಗ ಐಷರಾಮಿ ಹೊಟೇಲ್ ನಿರ್ಮಿಸಿದ್ದಾರೆ. ಮೈದಾನ ಬಚಾವೋ ಆಂದೋಲನಕಾರರು ಆ ಮೈದಾನವನ್ನು ಉಳಿಸುವುದಕ್ಕೋಸುಗ 100 ದಿನಗಳಿಗೆ ಮೇಲ್ಪಟ್ಟು ಸುದೀರ್ಘ ಹೋರಾಟವನ್ನು ಮಾಡಿದ್ದಾರೆ. ನಮ್ಮ ಸರ್ಕಾರಿ ಜಹಾಂಗೀರ ಬಾದಶಹನು (ಮುಖ್ಯಮಂತ್ರಿ) ಎಚ್ಚರಗೊಂಡು ನ್ಯಾಯ ಒದಗಿಸುವ ಕಾರ್ಯವನ್ನು ಕೈಕೊಳ್ಳುವವರೆಗೂ ಆಂದೋಲನ-ಕಾರರು ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ’ ಎಂದು ತಿಳಿಸಿದ್ದಾರೆ.
‘ಸರ್ಕಾರವು ಪಟ್ಟಭದ್ರರ ಕೈಗಳಿಂದ ಈ ಮೈದಾನವನ್ನು ಬಿಡಿಸುವವರೆಗೂ ಜನತೆಯ ಈ ಹೋರಾಟ ನಿಲ್ಲುವುದಿಲ್ಲ. ಪ್ರಜಾಸತ್ತೆಯ ಎದುರು ರಾಜಶಕ್ತಿ ತಲೆಬಾಗಲೇ ಬೇಕಾಗುತ್ತದೆ. ಜನತೆ ಕೈಕೊಂಡಿರುವ ಈ ಆಂದೋಲನವು ಇನ್ನೂ ಉಗ್ರವಾಗುತ್ತದೆ. ತನ್ನ ಹೋರಾಟದಲ್ಲಿ ಅದು ವಿದ್ಯಾರ್ಥಿಗಳನ್ನು ಕರೆದುಕೊಳ್ಳುತ್ತದೆ’ ಎಂದು ಗುಡುಗಿದ್ದಾರೆ.