ಬೆಂಗಳೂರು: ‘ವೈಚಾರಿಕ ಮನೋಭಾವ ಹಾಗೂ ಸೃಜನಶೀಲತೆಯೊಂದಿಗೆ ಜೀವನ ಪ್ರೀತಿಯನ್ನು ಪ್ರತಿ ಹಂತದಲ್ಲೂ ವ್ಯಕ್ತಪಡಿಸಿದ್ದ ಮಹಾನ್ ಚೇತನ ತೇಜಸ್ವಿ. ನನ್ನಂತಹ ಹಲವರಿಗೆ ಗುರುವಾಗಿದ್ದವರು’ ಎಂದು ಅಗ್ರಹಾರ ಕೃಷ್ಣಮೂರ್ತಿ ನೆನಪಿಸಿಕೊಂಡರು.
ಅನಿಕೇತನ ಕನ್ನಡ ಬಳಗವು ಕೃಷ್ಣರಾಜ ಪರಿಷ್ಮನಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪೂರ್ಣಚಂದ್ರ ತೇಜಸ್ವಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
‘ಈ ಪ್ರಶಸ್ತಿಯನ್ನು ಪಡೆಯಲು ನಿಜಕ್ಕೂ ನಾನು ಅರ್ಹನಲ್ಲ. ಆದರೆ, ಎಲ್ಲರ ಅಭಿಮಾನ ಹಾಗೂ ಅಂತಃಕರಣವೂ ಪ್ರಶಸ್ತಿಯನ್ನು ಸ್ವೀಕರಿಸುವಂತೆ ಮಾಡಿದೆ’ ಎಂದು ತಿಳಿಸಿದರು.
’ಒಬ್ಬ ಮಹಾನ್ ಸಾಹಿತಿಯ ಮಗನಾಗಿ, ತಂದೆಯ ಹೆಸರೆಂಬ ಅಯಸ್ಕಾಂತದ ಪರಿಧಿಯಿಂದ ಹೊರ ಬಂದು ಒಂದು ಶಕ್ತಿಯಾಗಿ ಹೊಮ್ಮಿದ್ದೇ ಇತಿಹಾಸ’ ಎಂದು ಶ್ಲಾಘಿಸಿದರು.
ಸಚಿವ ದಿನೇಶ್ ಗುಂಡೂರಾವ್, ‘ದೇಶ ಸಂಸ್ಕೃತಿಯಿಂದ ಶ್ರೀಮಂತವಾಗಿದೆ ಎನಿಸಿದರೂ ಅದರ ಒಳ ಹೊರಗೆ ಹಲವು ಲೋಪ ದೋಷಗಳಿವೆ. ಅದನ್ನು ಜಗತ್ತಿಗೆ ಸಾರಲು ಪ್ರಗತಿಪರ ಸಾಹಿತಿಗಳ ಅಗತ್ಯವಿದೆ’ ಎಂದುಅಭಿಪ್ರಾಯಪಟ್ಟರು.
‘ಸಮಾಜವನ್ನು ತಿದ್ದುವ ಕಾರ್ಯದಲ್ಲಿ ಸಾಹಿತಿಗಳ ಪಾತ್ರ ದೊಡ್ಡದು. ಯಾವುದೇ ಸಿದ್ಧಾಂತವಿದ್ದರೂ ವಿಮರ್ಶಾ ದೃಷ್ಟಿಯಿಂದ ಪ್ರತಿ ವಿಚಾರಗಳು ಮುಖ್ಯವೆನಿಸುತ್ತದೆ’ ಎಂದರು.
‘ಭ್ರಷ್ಟಾಚಾರ ಮತ್ತು ಜಾತೀಯತೆಯನ್ನು ವಿರೋಧಿಸಿ ಪುಖಾನುಪುಂಖವಾಗಿ ಭಾಷಣ ಮಾಡಬಹುದು. ವ್ಯವಸ್ಥೆ ತಿಳಿಯಾಗಿಲ್ಲ. ಸ್ವಲ್ಪ ಮಟ್ಟಿಗೆ ರಾಜಿಯಾಗದೇ ಏನನ್ನು ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.
’ಬಹಳ ಸರಳವಾಗಿ ನಡೆದುಕೊಂಡರೆ ಠೇವಣಿಯನ್ನೇ ಕಳೆದುಕೊಳ್ಳಬೇಕಾಗುತ್ತದೆ. ಸ್ವಲ್ಪ ಮಟ್ಟಿಗೆ ರಾಜಿಯಾಗಿಯೇ ಇದ್ದುದರಲ್ಲಿ ತುಸು ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಹೊರಗೆ ನಿಂತು ಚಿಂತಕ, ವಿಮರ್ಶಕನಾಗಿ ಟೀಕೆ ಮಾಡುವುದು ಸುಲಭ’ ಎಂದರು.
ಲೇಖಕಿ ಬಿ.ಟಿ.ಲಲಿತಾ ನಾಯಕ್, ‘ ಕುವೆಂಪು ಅವರಿಗೆ ಸರಿಸಮಾನದ ಪ್ರತಿಭೆ ತೇಜಸ್ವಿ, ಮಹಾಯುದ್ದ, ಪರಿಸರ ಎಲ್ಲದರ ಕುರಿತು ವಿಸ್ತೃತವಾಗಿ ಬರೆಯುವ ಚಾಕಚಕ್ಯತೆಯ ಅವರಿಗೆ ಮಾತ್ರ ಇತ್ತು’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.